ಡೈಲಿ ವಾರ್ತೆ : 31 ಆಗಸ್ಟ್ 2022

ಮಂಗಳೂರು: ಉಳ್ಳಾಲದ ಯುವಕನ ಮೃತದೇಹ ಮುಂಬೈಯಲ್ಲಿ ಪತ್ತೆ…!

ಮಂಗಳೂರು: ನಗರ ಹೊರವಲಯ ಉಳ್ಳಾಲದ ಯುವಕನೋರ್ವನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಬೃಹತ್ ಚರಂಡಿಯಲ್ಲಿ ಪತ್ತೆಯಾದ ಘಟನೆ ಮುಂಬೈನ ವಸಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಮೃತದೇಹದ ಜೇಬಿನಲ್ಲಿ ಸಿಕ್ಕ ಚುನಾವಣಾ ಗುರುತಿನ ಚೀಟಿಯ ಆಧಾರದಲ್ಲಿ ಉಳ್ಳಾಲ ಗುತ್ತು ಬಂಡಿಕೊಟ್ಯ ನಿವಾಸಿ ಸುಂದರ ಎಂಬವರ ಪುತ್ರ ಸುಧೀರ್ ಕುಮಾರ್(32) ಎಂದು ಗುರುತಿಸಲಾಗಿದೆ.
ಆಗಸ್ಟ್14ರಂದು ಕಾಣೆಯಾಗಿದ್ದ ಸುಧೀರ್ ಅವರ ಬಗ್ಗೆ ಮುಂಬೈಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಅವರ ಮೃತದೇಹ ಪತ್ತೆಯಾಗಿದೆ.


ಈ ಹಿಂದೆ ತನಗೆ ಜೀವ ಬೆದರಿಕೆ ಇತ್ತು ಎಂದು ಸುಧೀರ್ ಸ್ನೇಹಿತರಲ್ಲಿ ತಿಳಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇದೊಂದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುಧೀರ್ ಕುಮಾರ್ ಸಣ್ಣ ಪ್ರಾಯದಲ್ಲೇ ಮುಂಬೈಯಲ್ಲಿ ನೆಲೆಸಿದ್ದರಿಂದ ಸ್ಥಳೀಯರಿಗೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿದು ಬಂದಿದೆ.