ಡೈಲಿ ವಾರ್ತೆ : 31 ಆಗಸ್ಟ್ 2022

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾರು ಪಲ್ಟಿ: ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

ಬೆಳಗಾವಿ: ಮಾಜಿ ಡಿಸಿಎಂ ಹಾಗೂ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರ ಕಾರು ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಹಾರೂಗೇರಿ ಕ್ರಾಸ್ ಬಳಿ ಪಲ್ಟಿ ಆಗಿದ್ದು, ಸವದಿ ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಬುಧವಾರ ಮಧ್ಯಾಹ್ನ ಅಥಣಿಯಿಂದ ಗೋಕಾಕ್ ಮಾರ್ಗವಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಾರೋಗೇರಿ ಕ್ರಾಸ್ ಬಳಿ ಇರುವ ಏಕಲವ್ಯ ಕಾಲೇಜು ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ ಸಂಭವಿಸಿದೆ.

ರಸ್ತೆ ಮಧ್ಯೆ ಬೈಕ್ ಸವಾರರು ಏಕಾಏಕಿ ಎದುರಿಗೆ ಬಂದಾಗ,ಅಪಘಾತ ತಪ್ಪಿಸಲು ಹೋಗಿ ಮಾಜಿ ಉಪ ಮುಖ್ಯಮಂತ್ರಿಗಳ ಕಾರ್ ಚಾಲಕ ಪಕ್ಕದಲ್ಲಿರುವ ರಸ್ತೆಯಲ್ಲಿ ಕಾರ್ ಅನ್ನು ತೆಗೆದುಕೊಂಡ. ಈ ವೇಳೆ ಕಾರು ನಿಯಂತ್ರಣ ತಪ್ಪಿ ಘಟಪ್ರಭಾ ಎಡದಂಡೆ ಕಾಲುವೆಗೆ ಪಲ್ಟಿಯಾಗಿದೆ.
ಈ ಸಂದರ್ಭದಲ್ಲಿ ಲಕ್ಷ್ಮಣ ಸವದಿ ಅವರು ಕಾರಿನಲ್ಲಿ ಇದ್ದರು. ಘಟನೆಯಲ್ಲಿ ಸವದಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಯಾವುದೇ ರೀತಿಯ ಗಂಭೀರ ಸ್ವರೂಪದ ಗಾಯಗಳು ಆಗಿಲ್ಲ ಎಂದು ತಿಳಿದು ಬಂದಿದೆ. ಸ್ಥಳೀಯರ ಸಹಾಯದಿಂದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಕಾರ್ ಚಾಲಕನನ್ನು ಅಪಫಾತಕ್ಕೀಡಾದ ಕಾರಿನಿಂದ ಹೊರಗೆ ಸುರಕ್ಷಿತವಾಗಿ ತೆಗೆಯಲಾಗಿದೆ.