ಡೈಲಿ ವಾರ್ತೆ: 30 ನವಂಬರ್ 2022

ಬೆಂಗಳೂರು: ಈಜು ಸ್ಪರ್ಧೆಗೆ ಬಂದಿದ್ದ ಕೇರಳದ ಬಾಲಕ ಮೃತ್ಯು

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿದ್ದ ಆರು ದಿನದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಕೇರಳದ ತ್ರಿಶೋರ್ ಜಿಲ್ಲೆಯಿಂದ ಬಂದಿದ್ದ ಬಾಲಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ.

ರೋಷನ್ ರಶೀದ್ ಮೃತ ಬಾಲಕನಾಗಿದ್ದು, ಡಾ.ರಾಜು ಡೇವಿಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಆಗರದ ತಾತಗುಣಿ ಬಳಿ ಇರುವ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಆರು ದಿನದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಬಂದಿದ್ದ. ಅದರಂತೆ ನಿನ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಈಜು ಕೊಳದಿಂದ ಹೊರಬಂದ ನಂತರ ತಲೆ ಸುತ್ತುತ್ತಿರುವ ಬಗ್ಗೆ ಶಿಕ್ಷಕರಿಗೆ ತಿಳಿಸಿದ್ದಾನೆ.

ತಕ್ಷಣವೇ ಬಾಲಕನ್ನು ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿಗೆ ಸೇರಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಈ ಸಂಬಂಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.