ಡೈಲಿ ವಾರ್ತೆ: 01 ಡಿಸೆಂಬರ್ 2022

ಭದ್ರಾವತಿ: ಬೀದಿನಾಯಿ ದಾಳಿಗೆ ನಾಲ್ಕು ವರ್ಷದ ಬಾಲಕ ಬಲಿ.!

ಶಿವಮೊಗ್ಗ :ಬೀದಿ ನಾಯಿಗಳ‌ ದಾಳಿಗೆ ನಾಲ್ಕು ವರ್ಷದ ಬಾಲಕ ಮೃತಪಟ್ಟ ಘಟನೆ ಭದ್ರಾವತಿ ದಡಮಘಟ್ಟ ಗ್ರಾಮದಲ್ಲಿ ನಡೆದಿದೆ.

ನಸ್ರುಲ್ಲಾ ಎಂಬವರ ಮಗ ಸೈಯದ್ ಎಂಬ ಬಾಲಕನ‌ ಮೇಲೆ ಬೀದಿ ನಾಯಿಗಳು ಕ್ರೂರವಾಗಿ ದಾಳಿ‌ ಮಾಡಿದೆ. ಸೈಯದ್ ಮನೆಯಿಂದ ಹೊರಗೆ ಆಟವಾಡುತ್ತಿದ್ದಾಗ ನಾಯಿಗಳ ಗುಂಪು ದಾಳಿ ಮಾಡಿ ಬಾಲಕನಿಗೆ ಎಳೆದಾಡಿ ತಲೆಯನ್ನೇ ಸೀಳಿ ಹಾಕಿದೆ.

ಮನೆಯವರು ಹೊರಗೆ ಬಂದು ನೋಡುವಷ್ಟರಲ್ಲಿ ಬಾಲಕನ ಸ್ಥಿತಿ ಗಂಭೀರವಾಗಿತ್ತು. ತಕ್ಷಣ ಬಾಲಕನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದು ಕೊಂಡು ಬರುವಾಗ ಬಾಲಕ
ದಾರಿ ಮಧ್ಯೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಈ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಆದರೆ ಸಂಬಂಧ ಪಟ್ಟ ಪಂಚಾಯತಿಯವರು ಈ ಬಗ್ಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಇದರಿಂದಾಗಿ ಇದೀಗ ಜೀವವೊಂದು ಬಲಿಯಾಗಿದೆ ಎಂದು ಬಾಲಕನ‌ ಕಟುಂಬ ಆರೋಪಿಸಿದೆ.