ಡೈಲಿ ವಾರ್ತೆ: 30 ಡಿಸೆಂಬರ್ 2022

ಕಳ್ಳತನ, ದರೋಡೆಯ ಕುಖ್ಯಾತ ರೌಡಿ
ಬಾಲಕೃಷ್ಣ ಎನ್ ಅಲಿಯಾಸ್ ಬಾಲನ ಸೆರೆ

ಬೆಂಗಳೂರು: ಕಳ್ಳತನ, ದರೋಡೆ, ಕೊಲೆ ಪ್ರಯತ್ನ, ಬೆದರಿಸಿ ಸುಲಿಗೆ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಕುಖ್ಯಾತ ರೌಡಿ‌ಯೊಬ್ಬನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿ 3.50ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಲಕೃಷ್ಣ ಎನ್ ಅಲಿಯಾಸ್ ಬಾಲ(24) ಬಂಧಿತ ಆರೋಪಿಯಾಗಿದ್ದು,ಆತನಿಂದ 3.50ಲಕ್ಷ ಮೌಲ್ಯದ 70 ಗ್ರಾಂ ತೂಕದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.

ವಿದ್ಯಾರಣ್ಯಪುರದ ಸಾಯಿನಗರದ ಮೇಘಾ ಎಸ್ ಅವರ ಮನೆಗೆ ಕಳೆದ ನ.25 ರಂದು ಮಧ್ಯಾಹ್ನ 3 ರ ವೇಳೆ ಆರೋಪಿ ನುಗ್ಗಿ ಹಲ್ಲೆ ಮಾಡಿ 70 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಇನ್ಸ್’ಪೆಕ್ಟರ್ ಸುಂದರ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯು ಅಮೃತಹಳ್ಳಿ, ಮಾದನಾಯಕನಹಳ್ಳಿ, ಬಾಗಲುಗುಂಟೆ, ಮಹಾಲಕ್ಷ್ಮೀ ಲೇಔಟ್, ಪೀಣ್ಯ, ಸೂಲದೇವನಹಳ್ಳಿ, ಮಂಡ್ಯ ಪೊಲೀಸ್ ಠಾಣೆಗಳಲ್ಲಿ ರಾಬರಿ, ದರೋಡೆ, ಕೊಲೆಯತ್ನ, ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯ ವೇಳೆ ಪತ್ತೆಯಾಗಿದೆ.

ಆರೋಪಿಯು ಪೀಣ್ಯ ಹಾಗೂ ಬಾಗಲಗುಂಟೆ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದಾನೆ ಡಿಸಿಪಿ ಡಾ.ಅನೂಪ್ ಶೆಟ್ಟಿ ತಿಳಿಸಿದ್ದಾರೆ.