ಡೈಲಿ ವಾರ್ತೆ: 31 ಡಿಸೆಂಬರ್ 2022

ಆಕಸ್ಮಿಕ ಗುಡಿಸಲಿಗೆ ಬೆಂಕಿ: ಗುಡಿಸಲು ಭಸ್ಮ; ಓರ್ವ ಸಾವು

ಬೀದರ್: ಮಧ್ಯರಾತ್ರಿವರೆಗೆ ಪಾರ್ಟಿ ಮಾಡಿದ ನಂತರ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಬಿದ್ದು ಓರ್ವ ವ್ಯಕ್ತಿ ಸಜೀವ ದಹನಗೊಂಡಿರುವ ಘಟನೆ ಭಾಲ್ಕಿ ತಾಲೂಕಿನ ಹರನಾಳ ಗ್ರಾಮದಲ್ಲಿ ನಡೆದಿದೆ.

ಹರನಾಳದ ಜಗನ್ನಾಥ ಹಲಗೆ (60) ಮೃತಪಟ್ಟ ವ್ಯಕ್ತಿ. ಜಗನ್ನಾಥ ಹಲಗೆ ಹಾಗೂ ಮಾರುತಿ ಗೊರನೆ ಎಂಬ ಇಬ್ಬರು ನಿನ್ನೆ ತಡರಾತ್ರಿವರೆಗೆ ಪಾರ್ಟಿ ಮಾಡಿ ನಿದ್ದೆಗೆ ಜಾರಿದ್ದಾಗ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಜಗನ್ನಾಥನನ್ನು ರಕ್ಷಿಸಲು ಮುಂದಾಗಿದ್ದ ಮಾರುತಿಗೂ ಸಣ್ಣಪುಟ್ಟ ಗಾಯಗಳಾಗಿವೆ.


ಜಗನ್ನಾಥ ಹಲಗೆ ಸಾವಿನ ಸುದ್ದಿ ತಿಳಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಜೋಳ ಕಾಯಲು ಜಮೀನಿನಲ್ಲಿ ಪುಟ್ಟ ಗುಡಿಸಲು ನಿರ್ಮಿಸಿಕೊಂಡಿದ್ದರು. ಈ ಗುಡಿಸಲಿನಲ್ಲಿ ರಾತ್ರಿ ಪಾರ್ಟಿ ಮಾಡಿ ಜಗನ್ನಾಥ ಮತ್ತು ಮಾರುತಿ ಇಬ್ಬರು ನಿದ್ದೆಗೆ ಜಾರಿದ್ದಾರೆ. ಈ ವೇಳೆ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ದುರ್ಘಟನೆ ಸಂಭವಿಸಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಭಾಲ್ಕಿ ತಾಲೂಕಿನ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.