ವರದಿ : ಕುಮಾರ್ ನಾಯ್ಕ್ ಉಪ ಸಂಪಾದಕರು


ಶಿರಸಿ: ಗುಣಮಟ್ಟದ ಸೇವೆ ನೀಡುತ್ತಾ ಬಂದ ಸ್ಕೊಡ್ ವೆಸ್‌ ಸಂಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸತ್ಯಕ್ಕೆ ದೂರವಾದ ಸಂಗತಿಗಳನ್ನು ಬಿತ್ತರಿಸಿದ್ದು, ಸುಳ್ಳು ಸುದ್ಧಿ ಪ್ರಕಟಿಸಿದ ಫೇಸ್‌ಬುಕ್‌ ಪೇಜ್‌ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಕೊಡ್‌ವೆಸ್‌ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಹೇಳಿದರು.

ನಗರದ ಸ್ಕೊಡ್‌ ವೆಸ್‌ ಕಚೇರಿಯಲ್ಲಿ ಭಾನುವಾರ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣವನ್ನೇ ಬಳಸಿಕೊಂಡು ಸ್ಕೊಡ್‌ ವೆಸ್‌ ಸಂಸ್ಥೆಯ ಹೆಸರಿಗೆ ಮಸಿಬಳಿಯುವ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ಸುಳ್ಳು ಸುದ್ಧಿ ಹಬ್ಬಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ. ಸಾರ್ವಜನಿಕ ವಲಯದಲ್ಲಿ ಪಾರದರ್ಶಕ ಹಾಗೂ ಗುಣಮಟ್ಟದ ಸೇವೆಯೊಂದಿಗೆ ಗುರುತಿಸಿಕೊಂಡ ನಮ್ಮ ಸಂಸ್ಥೆ ಯಾವುದೇ ಯೋಜನೆಯ ದುರುಪಯೋಗ ಮಾಡಿಲ್ಲ ಎಂದು ಸ್ಪಷ್ಟಪಡಿಸಿರು.

ಕಳೆದ 2008 ರಿಂದ ಈವರೆಗೆ ರಾಜ್ಯದಾದ್ಯಂತ 28 ಸಂಚಾರಿ ಆರೋಗ್ಯ ಘಟಕಗಳ ಮೂಲಕ 14 ಲಕ್ಷ ರೋಗಿಗಳನ್ನು ಉಪಚರಿಸಲಾಗಿದೆ. 53 ರೈತ ಉತ್ಪಾದಕ ಕಂಪನಿಗಳನ್ನು ರಚಿಸುವ ಮೂಲಕ 45,000 ರೈತ ಕುಟುಂಬಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರ ಸಬಲೀಕರಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಕಳೆದ 12 ವರ್ಷಗಳಲ್ಲಿ 72,747.26 ಹೆಕ್ಟೇರ್ ಪ್ರದೇಶಗಳಲ್ಲಿ ಜಲಾನಯನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಅನಾಥ ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿ ಸ್ವಧಾರ ಗೃಹ, ಮಕ್ಕಳ ಸಹಾಯವಾಣಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯ ನಿರುದ್ಯೋಗ ಯುವಕ-ಯುವತಿಯರಿಗಾಗಿ ಕೌಶಲ್ಯ ತರಬೇತಿಗಳನ್ನು ನೀಡಲಾಗಿದೆ. ಡಿಗ್ಗೆ ಮತ್ತು ಕ್ಯಾಸಲ್ ರಾಕ್‌ನಂತಹ ದುರ್ಗಮ ಕಾಡುಗಳ ನಡುವೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸೇವೆಯನ್ನು ಉತ್ತಮ ದರ್ಜೆಗೆ ಏರಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ 22 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಕೊಡ್‌ ವೆಸ್‌, ಶೇ.100 ರಷ್ಟು ಕಾನೂನಾತ್ಮಕ ನಿಯಮಾವಳಿಗಳನ್ನು ಪಾಲಿಸುತ್ತಿರುವ ಐಎಸ್‌ಒ ಪ್ರಮಾಣೀಕೃತ ಸಂಸ್ಥೆಯಾಗಿದೆ. ಸೊಡ್ವೆಸ್ ಈಗಾಗಲೇ 250ಕ್ಕೂ ಹೆಚ್ಚು ಸಿಬ್ಬಂದಿ ಹೊಂದಿರುವ ಹಾಗೂ ಇಎಸ್‌ಐ, ಪಿಎಫ್‌ ಸೌಲಭ್ಯ ಒದಗಿಸುತ್ತಿರುವ ಜಿಲ್ಲೆಯ ಏಕೈಕ ಸ್ವಯಂ ಸೇವಾ ಸಂಸ್ಥೆ. ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರದ 24 ಯೋಜನೆಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸುತ್ತಿರುವ ನಮ್ಮ ಸಂಸ್ಥೆಗೆ ಸರ್ಕಾರದ ಪ್ರಶಂಸೆ ಕೂಡ ಲಭಿಸಿದೆ ಎಂದರು.

ಸಂಸ್ಥೆಯ ಬಗ್ಗೆ ಮಾಹಿತಿ ಅಥವಾ ಯಾವುದೇ ದಾಖಲೆ ಪರಿಶೀಲನೆಗೆ ಮುಕ್ತವಾಗಿದ್ದು, ಕಚೇರಿ ಸಮಯದಲ್ಲಿ ಬಂದು ಅಧಿಕೃತ ಗುರುತಿನ ಚೀಟಿ ಹಾಗೂ ಮನವಿ ಪತ್ರದೊಂದಿಗೆ ಅನುಮತಿ ಪಡೆದು ತಿಳಿದುಕೊಳ್ಳಬಹುದಾಗಿದೆ ಎಂದ ಅವರು, ಈವರೆಗೆ ನಮ್ಮ ಸಂಸ್ಥೆಯ ಬಗ್ಗೆ ಯಾವುದೇ ಅಧಿಕಾರಿಗಳು ಹಣ ದುರುಪಯೋಗ ಮಾಡಿಕೊಂಡ ಬಗ್ಗೆಯಾಗಲೀ, ಕಾನೂನು ಕ್ರಮ ಕೈಗೊಳ್ಳುವಬಗ್ಗೆ ಯಾವುದೇ ನೋಟಿಸ್‌ ಬಂದಿಲ್ಲ. ನಮ್ಮ ಸಂಸ್ಥೆ ಯಾವುದೇ ಕಾರ್ಯಕ್ರಮ ಅನುಷ್ಠಾನದಲ್ಲಿ ನಿಷ್ಕಾಳಜಿ ತೋರಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ವಿಭಾಗದ ಮುಖ್ಯಸ್ಥೆ ಸರಸ್ವತಿ ಎನ್‌ ರವಿ, ಸಿಬ್ಬಂದಿ ವಿಭಾಗದ ಮುಖ್ಯಸ್ಥ ರಿಯಾಝ್‌ ಸಾಗರ್‌ ಮತ್ತಿತರರು ಇದ್ದರು.