ವರದಿ : ಕುಮಾರ್ ನಾಯ್ಕ್ ಉಪ ಸಂಪಾದಕರು


ಕಾರವಾರ: ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಲಾಡ್ಜೊಂದರ ಮೇಲೆ ದಾಳಿ ನಡೆಸಿದ ಪೊಲೀಸರು, ಯುವತಿಯೋರ್ವಳನ್ನು ರಕ್ಷಿಸಿ, ಆರೋಪಿಯನ್ನು ಬಂಧಿಸಿದ ಘಟನೆ ಭಾನುವಾರ ನಡೆದಿದೆ.

ಕಾರವಾರದ ಸುಮಿತ್ರಾ ಲಾಡ್ಜ್‍ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಆಧಾರದಲ್ಲಿ ಲಾಡ್ಜ್ ಮೇಲೆ ದಾಳಿ ನಡೆಸಿದ ಕಾರವಾರ ನಗರ ಠಾಣೆಯ ಪೊಲೀಸರು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪಿಯನ್ನು ವಶಕ್ಕೆ ಪಡೆದು ಯುವತಿಯನ್ನು ರಕ್ಷಿಸಿದ್ದಾರೆ.
ದಾಳಿಯ ವೇಳೆ ಕುಮಟಾದ ಸುಭಾಷ ರೋಡಿನ ನಿವಾಸಿ ಹೇಮಾಂಶು ನಾಯಕ ಎನ್ನುವವನನ್ನು ಪೊಲೀಸರು ಬಂಧಿಸಿದ್ದು, ಲಾಡ್ಜ್ ನಡೆಸುತ್ತಿದ್ದ ಸತೀಶ ರಾಣೆ ಹಾಗೂ ಮಾಲಕ ಭಗವಾನದಾಸ ವೆರ್ಣೇಕರ್ ಮೇಲೆಯೂ ಪ್ರಕರಣ ದಾಖಲಾಗಿದೆ. ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಒಪ್ಪಿಸಿಲಾಗಿದ್ದು, ಇನ್ನಷ್ಟು ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ಡಿಎಸ್‍ಪಿ ವ್ಯಾಲಂಟೈನ್ ಡಿಸೋಜಾ ಮಾರ್ಗದರ್ಶನದಲ್ಲಿ ಸಿಪಿಐ ಸಿದ್ದಪ್ಪ ಬಿಳಗಿ, ಪಿಎಸ್‍ಐ ಸಂತೋಷಕುಮಾರ, ಪ್ರೊಬೇಷನರಿ ಪಿಎಸ್‍ಐ ಶಾಂತಿನಾಥ, ಕೃಷ್ಣ ಗೌಡ ಅರಕೇರಿ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.