ಡೈಲಿ ವಾರ್ತೆ: 30 ಅಕ್ಟೋಬರ್ 2022

ಬಸವಲಿಂಗ ಸ್ವಾಮೀಜಿ ಹನಿಟ್ರ್ಯಾಪ್ ಪ್ರಕರಣ: ಯುವತಿ ಸಹಿತ ಮೂವರ ಬಂಧನ

ಬೆಂಗಳೂರು: ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ(45) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದ್ದು, ಮಾಗಡಿ ತಾಲ್ಲೂಕಿನ ಕಣ್ಣೂರು ಮಠದ ಡಾ.ಮೃತ್ಯುಂಜಯ ಶ್ರೀ ಹಾಗೂ ಯುವತಿ ನೀಲಾಂಬಿಕೆ ಹಾಗೂ ನಿವೃತ್ತ ಶಿಕ್ಷಕ ಹಾಗೂ ವಕೀಲ ಮಹದೇವಯ್ಯ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಕಣ್ಣೂರು ಶ್ರೀಗಳನ್ನು ಎ1, ಯುವತಿ ನೀಲಾಂಬಿಕೆ ಅಲಿಯಾಸ್ ಚಂದು ಎ2 ಮತ್ತು ನಿವೃತ್ತ ಶಿಕ್ಷಕ ಮಹದೇವಯ್ಯ ಅವರನ್ನು ಎ3 ಆರೋಪಿ ಎಂದು ಪ್ರಕರಣ ದಾಖಲಿಸಲಾಗಿದೆ. ಬಂಧಿತ ಮಹದೇವಯ್ಯ ತುಮಕೂರಿನ ನಿವಾಸಿಯಾಗಿದ್ದಾರೆ.

ಬಸವಲಿಂಗ ಶ್ರೀ ಡೆತ್ ನೋಟ್ ನಲ್ಲಿ ಈ ಆರೋಪಿಗಳ ಕುರಿತು ಮಾಹಿತಿ ನೀಡಿದ್ದರು. 21 ವರ್ಷದ ಯುವತಿ ನೀಲಾಂಬಿಕೆಯನ್ನು ಬಿಟ್ಟು ಶ್ರೀಗಳ ಹನಿಟ್ರ್ಯಾಪ್ ಮಾಡಲಾಗಿತ್ತು ಎನ್ನಲಾಗಿದೆ. ಈ ಯುವತಿ ದೊಡ್ಡಬಳ್ಳಾಪುರದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಮನಗರ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರಕರಣ ಭೇದಿಸಲು ಮೂರು ತಂಡಗಳನ್ನು ರಚಿಸಿದ್ದಾರೆ. ನಾಲ್ವರು ಸಿಪಿಐ ಹಾಗೂ ಐದು ಜನ ಪಿಎಸ್‍ಐ ಮತ್ತು ಒಬ್ಬರು ಎವೈಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.