ಡೈಲಿ ವಾರ್ತೆ: 06 ನವಂಬರ್ 2022

ಚಿಕ್ಕಮಗಳೂರು ಮಸೀದಿ ವಿವಾದ: ಸ್ಥಳಕ್ಕೆ ನಗರ ಸಭೆ ಅಧ್ಯಕ್ಷ, ಅಧಿಕಾರಿಗಳ ಭೇಟಿ

ಚಿಕ್ಕಮಗಳೂರು: ಅನಧಿಕೃತ ಮಸೀದಿ ನಿರ್ಮಾಣದ ಆರೋಪದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯ ಆಶ್ರಯ ಯೋಜನೆ ಬಡಾವಣೆಯ ಮಸೀದಿಗೆ ನಗರಸಭೆ ಅಧ್ಯಕ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅನೇಕ ವರ್ಷಗಳಿಂದ ಈ ಮಸೀದಿ ಕಾರ್ಯಾಚರಿಸುತ್ತಿತ್ತು ಎನ್ನಲಾಗಿದೆ. ಮಸೀದಿಯು ಅನಧಿಕೃತ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಪರಿಶೀಲನೆ ನಡೆಸಿದ್ದು, 3 ದಿನಗಳ ಒಳಗೆ ಮಸೀದಿ ದಾಖಲೆಗಳನ್ನು ಹಾಜರುಪಡಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ.

ಮಸೀದಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಇಲ್ಲವಾದರೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. ಇದೇ ವೇಳೆ ನಗರಸಭೆ ಆಯುಕ್ತ ಬಸವರಾಜ್ ಮತ್ತಿತರರು ಇದ್ದರು.