ವರದಿ : ಗ್ಯಾನಪ್ಪ ದೊಡ್ಡಮನಿ ಮಸ್ಕಿ,

ಮಸ್ಕಿ : ಅಭಿನಂದನ್ ಸಂಸ್ಥೆಯು ಆರಂಭಿಸಿದ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ 28 ನೇ ವಾರದ ಸೇವಾ ಕಾರ್ಯವನ್ನು ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹದ ಜಾಗೃತಿಯನ್ನು ಮೂಡಿಸುವ ಸಲುವಾಗಿ ಮಸ್ಕಿ ರಾಜ್ಯ ಹೆದ್ದಾರಿಯ ಸ್ಪೀಡ್ ಬ್ರೇಕರ್ ಗಳಿಗೆ ಬಣ್ಣವನ್ನು ಹಚ್ಚುವ ಮೂಲಕ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ‌ಮಸ್ಕಿ ಸಿಪಿಐ ಸಂಜೀವ್ ಬಳಿಗೇರ ಅವರು ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಅಭಿನಂದನ್ ಸಂಸ್ಥೆಯು ಯುವಕರನ್ನು ಸಮಾಜಿಕ ಸೇವೆಯತ್ತ ಪ್ರಚೋದನೆ ಮಾಡಲು ಜಾರಿಗೆ ತಂದ ಈ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಮೂಲಕ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹಕ್ಕೆ ಕೈ ಜೋಡಿಸಿರುವದು ಇನ್ನೂ ವಿಶೇಷ ಸಂಗತಿಯಾಗಿದೆ. ಹಾಗೆಯೇ ಜನರು ರಸ್ತೆಯ ನಿಯಮಗಳನ್ನು ಪಾಲಿಸಿ, ಹೆಲ್ಮೆಟ್ ಧರಿಸಿ ವಾಹನಗಳನ್ನು ಚಲಾವಣೆ ಮಾಡುವದರಿಂದಾಗಿ ಆಗುವಂತಹ ರಸ್ತೆ ಅಪಘಾತಗಳನ್ನು ತಪ್ಪಿಸಲು ಸಹಾಯ ಆಗುತ್ತದೆ. ಇದರಿಂದಾಗಿ ಸಾಧ್ಯವಾದಷ್ಟು ಜೀವ ಹಾನಿಯನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.


ಈ ಸೇವಾ ಕಾರ್ಯದಲ್ಲಿ ಮಸ್ಕಿಯ ಖ್ಯಾತ ವೈದ್ಯರಾದ ಮಲ್ಲಿಕಾರ್ಜುನ ಇತ್ಲಿ, ಶಿವರಾಜ್ ತೋರಣದಿನ್ನಿ, ಬಸವರಾಜ ಸಜ್ಜನ್, ಅಭಿನಂದನ್ ಸಂಸ್ಥೆಯ ಗೌರವಾಧ್ಯಕ್ಷರಾದ ಶಿವಪ್ರಸಾದ್ ಕ್ಯಾತನಟ್ಟಿ, ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಪದಾಧಿಕಾರಿಗಳಾದ ಪ್ರಶಾಂತ್ ಇಂಡಿ, ಬಸವರಾಜ ಬನ್ನಿಗಿಡ, ಆಶಾ ಕ್ಯಾತನಟ್ಟಿ, ಮಲ್ಲಿಕಾರ್ಜುನ ಬಡಿಗೇರ, ಅಮೀತ್ ಕುಮಾರ್ ಪುಟ್ಟಿ, ಕಿಶೋರ್, ಸುರೇಶ್ ಪತ್ತಾರ್, ಈರೇಶ್ ದೇವರಮನಿ ಸಿಂಧನೂರು, ಶ್ರೀಶೈಲ, ಮಸ್ಕಿ ಪೋಲಿಸ್ ಠಾಣೆಯ ಸಿಬ್ಬಂದಿಗಳು ಮತ್ತು ಇತರರು ಭಾಗಿಯಾಗಿದ್ದರು.