ಡೈಲಿ ವಾರ್ತೆ: 06 ಅಕ್ಟೋಬರ್ 2022

ಕೇರಳ: ಎರಡು ಬಸ್ ಗಳ ನಡುವೆ ಭೀಕರ ಅಪಘಾತ: 9 ಮಂದಿ ಮೃತ್ಯು ಹಲವರಿಗೆ ಗಾಯ..!

ಪಾಲಕ್ಕಾಡ್(ಕೇರಳ): ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್ಸೊಂದು ಹಿಂದಿನಿಂದ ಕೆಎಸ್ ಆರ್ ಟಿಸಿ ಬಸ್ (ಕೇರಳ ರಸ್ತೆ ಸಾರಿಗೆ ಸಂಸ್ಥೆ) ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಿನ್ನೆ ಮಧ್ಯರಾತ್ರಿ ಕೇರಳದ ವಡಕಂಚೇರಿ ಅಂಕುಮೂರ್ತಿ ಮಂಗಲದ ಬಳಿ ನಡೆದಿದೆ.

ಟೂರಿಸ್ಟ್ ಬಸ್ ನಲ್ಲಿ ಒಟ್ಟು 42 ವಿದ್ಯಾರ್ಥಿಗಳಿದ್ದರು ಹಾಗೂ ಕೆಎಸ್ ಆರ್ ಟಿಸಿ ಬಸ್ ನಲ್ಲಿ 49 ಜನ ಪ್ರಯಾಣಿಕರಿದ್ದರು. ಭೀಕರ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ.

ಮೃತರನ್ನು ಶಾಲಾ ಶಿಕ್ಷಕಿ ವಿಷ್ಣು ವಿಕೆ ಮತ್ತು ವಿದ್ಯಾರ್ಥಿಗಳಾದ ಅಂಜನಾ ಅಜಿತ್, ಇಮ್ಯಾನುಯೆಲ್ ಸಿಎಸ್, ದಿಯಾ ರಾಜೇಶ್, ಕ್ರಿಸ್ ವಿಂಟರ್ ಬೋರ್ನ್ ಥಾಮಸ್, ಎಲ್ನಾ ಜೋಸ್ (ವಿದ್ಯಾರ್ಥಿಗಳು) ಮತ್ತು ಕೊಲ್ಲಂನ ವಲಿಯೋಡೆ ನಿವಾಸಿ ಅನೂಪ್ (22), ರೋಹಿತ್ ರಾಜ್ (24) ಮತ್ತು ದೀಪು (ಕೆಎಸ್ಆರ್ ಟಿಸಿ ಬಸ್ ಪ್ರಯಾಣಿಕರು) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಾಯಗೊಂಡ ಸುಮಾರು 50 ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು ಅವರಲ್ಲಿ. ಹಲವರ ಸ್ಥಿತಿ ಚಿಂತಾಜನಕವಾಗಿದೆ.

ಪ್ರವಾಸಿ ಬಸ್ 42 ವಿದ್ಯಾರ್ಥಿಗಳು ಮತ್ತು ಐವರು ಶಿಕ್ಷಕರನ್ನು ಕರೆದೊಯ್ಯುತ್ತಿತ್ತು. ಕೆಎಸ್ ಆರ್ ಟಿಸಿ ಬಸ್ ಕೇರಳದ ಕೊಟ್ಟಾರಕ್ಕರದಿಂದ ತಮಿಳುನಾಡಿನ ಕೊಯಮತ್ತೂರಿಗೆ ತೆರಳುತ್ತಿದ್ದು, 81 ಪ್ರಯಾಣಿಕರಿದ್ದರು. ದುರ್ಘಟನೆಯಲ್ಲಿ ಐವರು ವಿದ್ಯಾರ್ಥಿಗಳು ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದರೆ. 40 ಜನರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಪಾಲಕ್ಕಾಡ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೇರಳ ರಸ್ತೆ ಸಾರಿಗೆ ಸಚಿವ ಆಂಟನಿ ರಾಜು ತಿಳಿಸಿದ್ದಾರೆ.

ಪ್ರವಾಸಿ ಬಸ್ ಎರ್ನಾಕುಲಂನ ಮಾರ್ ಬಸೆಲಿಯೋಸ್ ಶಾಲೆಗೆ ಸೇರಿದ್ದು, ಇವರೆಲ್ಲ ತಮಿಳುನಾಡು ಪ್ರವಾಸಕ್ಕೆ ತೆರಳುತ್ತಿದ್ದರು. ಈ ಪ್ರವಾಸಿ ಬಸ್ ವೇಗವಾಗಿ ಚಲಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದುರ್ಘಟನೆ ನಡೆದ ಸ್ಥಳದಲ್ಲಿ ಆಲತ್ತೂರು, ವಡಕಂಚೇರಿ ಅಗ್ನಿಶಾಮಕ ದಳ ಮತ್ತು ಜನರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಮೃತರಲ್ಲಿ ಮೂವರು ಕೆಎಸ್ ಆರ್ ಟಿಸಿ ಬಸ್ ನ ಪ್ರಯಾಣಿಕರಾಗಿದ್ದರೆ, ಟೂರಿಸ್ಟ್ ಬಸ್ ನಲ್ಲಿ ಐವರು ಕೊನೆಯುಸಿರೆಳೆದಿದ್ದಾರೆ. 6 ಮಂದಿ ಪುರುಷರು ಮತ್ತು ಮೂವರು ಮಹಿಳೆಯರ ಪ್ರಾಣ ಪಕ್ಷಿ ಹಾರಿಹೋಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.