ಡೈಲಿ ವಾರ್ತೆ: 29 ನವಂಬರ್ 2022

ಬೈಂದೂರು: ತಂದೆ, ಮಗನಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡದೇ ಜಾತಿನಿಂದನೆ: ಅರ್ಚಕನ ವಿರುದ್ಧ ದೂರು ದಾಖಲು!

ಕುಂದಾಪುರ : ದೇವಸ್ಥಾನಕ್ಕೆ ಪ್ರವೇಶ ಹಾಗೂ ಪೂಜೆಗೆ ನಿರಾಕರಿಸಿ ಜಾತಿನಿಂದನೆ ಗೈದ ಆರೋಪದ ಮೇಲೆ ಕಂಬದ ಕೋಣೆ ಗ್ರಾಮದ ಕೊಕ್ಕೇಶ್ವರ ದೇವಸ್ಥಾನದ ಅರ್ಚಕರ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಂಬದಕೋಣೆ ಗ್ರಾಮದ ಹಳಗೇರಿಯ ಶಿವರಾಮ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇವರು ಸೆ.28 ರಂದು ಬೆಳಗ್ಗೆ ತಮ್ಮ ಮಗನೊಂದಿಗೆ ಪೂಜಾ ಸಾಮಾಗ್ರಿಗಳನ್ನು ತೆಗೆದುಕೊಂಡು ಕಂಬದ ಕೋಣೆ ಗ್ರಾಮದ ಕೊಕ್ಕೇಶ್ವರ ದೇವಸ್ಥಾನಕ್ಕೆ ಹೋಗಿದ್ದರು. ದೇವಸ್ಥಾನದ ಗರ್ಭ ಗುಡಿಯ ಬಳಿ ಇದ್ದ ದೇವಸ್ಥಾನದ ಅರ್ಚಕ ಶೇಷಗಿರಿ ಕಾರಂತ್ ಅವರು ಶಿವರಾಮ ಹಾಗೂ ಅವರ ಮಗನನ್ನು ತಡೆದು ನಿಲ್ಲಿಸಿದ್ದರು.

ಈ ವೇಳೆ ಶೇಷಗಿರಿ ಕಾರಂತರವರಲ್ಲಿ ದೇವರಿಗೆ ಪೂಜೆ ಮಾಡಿಕೊಡುವಂತೆ ಶಿವರಾಮ ವಿನಂತಿಸಿಕೊಂಡಿದ್ದು ಅದಕ್ಕೆ ಶೇಷಗಿರಿ ಕಾರಂತರು ಒಪ್ಪಲಿಲ್ಲ ಹಾಗೂ ಅರ್ಚಕರು ಶಿವರಾಮ ಹಾಗೂ ಅವರ ಮಗನಿಗೆ ಜಾತಿನಿಂದನೆ ಮಾಡಿ ದೇವಸ್ಥಾನಕ್ಕೆ ಪ್ರವೇಶ ಹಾಗೂ ಪೂಜೆಗೆ ನಿರಾಕರಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.