ಡೈಲಿ ವಾರ್ತೆ: 12 ಡಿಸೆಂಬರ್ 2022

ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವೈಟ್ ಲಿಫ್ಟಿಂಗ್ ಕೋಚ್ ರಾಜೇಂದ್ರ ಪ್ರಸಾದ್ ಹೃದಯಾಘಾತದಿಂದ ಸಾವು

ಪುತ್ತೂರು: ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ವೈಟ್ ಲಿಫ್ಟಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಳ್ಯಪದವು ನಿವಾಸಿ ಪ್ರಸ್ತುತ ಪಡೀಲಿನಲ್ಲಿ ವಾಸವಿರುವ ರಾಜೇಂದ್ರ ಪ್ರಸಾದ್ (42) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತ ರಾಜೇಂದ್ರ ಪ್ರಸಾದ್ ರವರಿಗೆ ಮನೆಯಲ್ಲಿ ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡಿತ್ತು. ಸ್ವತಃ ತಮ್ಮ ಕಾರು ಚಲಾಯಿಸಿಕೊಂಡು ರಾಜೇಂದ್ರರು ತಮ್ಮ ಮಗಳನ್ನು ಶಾಲೆಗೆ ಬಿಟ್ಟು ಬಳಿಕ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಆದರೆ ಅಲ್ಲಿ ಇಸಿಜಿ ತೆಗೆಯುವ ಮೊದಲೇ ಸಾವನ್ನಪ್ಪಿದ್ದಾರೆ.

ಮೃತ ರಾಜೇಂದ್ರ ಪ್ರಸಾದ್‌ ಮೂಡಬಿದ್ರೆ ಅಳ್ವಾಸ್ ಕಾಲೇಜಿನಲ್ಲಿ ವೈಟ್ ಲಿಫ್ಟಿಂಗ್ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉಜಿರೆ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಖ್ಯ ಕೋಚ್ `ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾಜೇಂದ್ರ ಪ್ರಸಾದ್ ರವರ ಗರಡಿಯಲ್ಲಿ ನಾಲ್ಕು ಮಂದಿ ಅಂತರ್ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಏಕಲವ್ಯ ಪ್ರಶಸ್ತಿ ಪುರಸ್ಕೃತ, ಇಂಗ್ಲೆಂಡಿನ ಬರ್ಮಿಂಗ್ ಹ್ಯಾಂನಲ್ಲಿ ನಡೆದಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ (2018ರಲ್ಲಿ ಬೆಳ್ಳಿ ಪದಕ) ಪಡೆದಿರುವ ಗುರುರಾಜ್ ಪೂಜಾರಿಯವರು ರಾಜೇಂದ್ರ ಪ್ರಸಾದ್ ರವರ ಶಿಷ್ಯರಾಗಿದ್ದರು ಎನ್ನಲಾಗಿದೆ. ಮೃತ ರಾಜೇಂದ್ರ ಪ್ರಸಾದ್ ರವರು ತಂದೆ ರಾಮಕೃಷ್ಣ, ತಾಯಿ ಇಂದಿರಾವತಿ, ಪತ್ನಿ ಬಂಟ್ವಾಳ ಬಿಇಒ ಕಛೇರಿಯಲ್ಲಿ ಕ್ಲರ್ಕ್ ಆಗಿರುವ ಪ್ರತಿಮಾ, ಪುತ್ರಿಯರಾದ ಸಮನ್ವಿ, ಮಾನ್ವಿ, ಸಹೋದರಿ ಐಶ್ವರ್ಯರವರನ್ನು ಅಗಲಿದ್ದಾರೆ.