



ಡೈಲಿವಾರ್ತೆ: 07/ಜೂ./2026


ಜಮೀರ್ ಅಹಮದ್ ಮತ್ತೊಮ್ಮೆ ಸಚಿವರಾಗಲಿದ್ದಾರೆ: ಕೋಡಿಮಠದ ಶ್ರೀಗಳ ಭವಿಷ್ಯ

ಅರಸೀಕೆರೆ: ಸಚಿವ ಸ್ಥಾನ ಕಳೆದುಕೊಂಡಿರುವ ಜಮೀರ್ ಅಹಮದ್ ಖಾನ್ ಅವರು ಶೀಘ್ರದಲ್ಲೇ ಮತ್ತೊಮ್ಮೆ ರಾಜ್ಯ ಮಂತ್ರಿಮಂಡಲವನ್ನು ಸೇರಲಿದ್ದಾರೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಇಲ್ಲಿನ ಅಲ್ ಅಮೀನ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಗಳು, ಪ್ರಸ್ತುತ ಜಮೀರ್ ಅಹಮದ್ ಅವರ ಸುತ್ತ ಕೇಳಿಬರುತ್ತಿರುವ ಆಡಿಯೋ ವಿವಾದವು ಕೇವಲ ಅಪಪ್ರಚಾರದ ಉದ್ದೇಶದಿಂದ ಕೂಡಿದೆ. ಈ ಹಿಂದಿನ ದೊಡ್ಡ ಅಪಪ್ರಚಾರವನ್ನು ಮುಚ್ಚಿಹಾಕಲು ಈ ಹೊಸ ವಿವಾದವನ್ನು ಸೃಷ್ಟಿಸಲಾಗಿದೆ. ಹೀಗಾಗಿ ಜಮೀರ್ ಅವರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು.
ಶಿವಲಿಂಗೇಗೌಡರಿಗೂ ಮಂತ್ರಿ ಸ್ಥಾನದ ಭರವಸೆ:
ಇದೇ ಸಂದರ್ಭದಲ್ಲಿ ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ಕುರಿತೂ ಪ್ರಸ್ತಾಪಿಸಿದ ಶ್ರೀಗಳು, “ಜಮೀರ್ ಅಹಮದ್ ಅವರೊಂದಿಗೆ ನಮ್ಮ ಶಿವಲಿಂಗೇಗೌಡರಿಗೂ ಸಚಿವ ಸ್ಥಾನ ಸಿಗಲಿದೆ. ಈ ಕುರಿತು ಯೋಚಿಸುವ ಅಗತ್ಯವಿಲ್ಲ. ಸಂಬಂಧಪಟ್ಟ ನಾಯಕರೊಂದಿಗೆ ನಾನು ಈಗಾಗಲೇ ಮಾತುಕತೆ ನಡೆಸಿದ್ದು, ಮುಂದಿನ ದಿನಗಳಲ್ಲೂ ಚರ್ಚಿಸಲಿದ್ದೇನೆ. ಯಾವುದೇ ಕಾರಣಕ್ಕೂ ಜಮೀರ್ ಇಲ್ಲದ ಸರ್ಕಾರ ರಚನೆಯಾಗಲು ಸಾಧ್ಯವಿಲ್ಲ. ಅವರ ಉಪಸ್ಥಿತಿಯಿದ್ದಾಗ ಮಾತ್ರ ಅದಕ್ಕೊಂದು ಪೂರ್ಣ ಪ್ರಮಾಣದ ಸರ್ಕಾರದ ಸ್ವರೂಪ ಬರಲಿದೆ” ಎಂದು ಅಭಿಪ್ರಾಯಪಟ್ಟರು.
ಶಾಂತಿ ಕಾಪಾಡಲು ಕರೆ:
ಜಮೀರ್ ಅಹಮದ್ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು ಯಾವುದೇ ಕಾರಣಕ್ಕೂ ಆಕ್ರೋಶಕ್ಕೆ ಒಳಗಾಗಬಾರದು. ಸದ್ಯದ ಪರಿಸ್ಥಿತಿಯಲ್ಲಿ ಶಾಂತಿ ಮತ್ತು ಸಂಯಮದಿಂದ ವರ್ತಿಸಬೇಕು. ಜಮೀರ್ ಅವರಿಗೆ ಸಚಿವ ಸ್ಥಾನ ಸಿಗುವ ನಿಟ್ಟಿನಲ್ಲಿ ಮಠದ ಕಡೆಯಿಂದಲೂ ಅಗತ್ಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.
ಜಮೀರ್ ಅಹಮದ್ ಅವರು ಜಾತ್ಯತೀತ ಮನೋಭಾವದಿಂದ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ. ಅವರ ಮೇಲೆ ಭಗವಂತನ ಕೃಪೆಯಿದ್ದು, ಶೀಘ್ರದಲ್ಲೇ ಅವರು ಮಂತ್ರಿಯಾಗಲಿದ್ದಾರೆ. ಅವರು ಸಚಿವರಾದ ತಕ್ಷಣವೇ ಜಮೀರ್ ಅಹಮದ್ ಹಾಗೂ ಶಾಸಕ ಶಿವಲಿಂಗೇಗೌಡ ಇಬ್ಬರನ್ನೂ ಮಠಕ್ಕೆ ಆಹ್ವಾನಿಸಿ ಸನ್ಮಾನಿಸಲಾಗುವುದು ಎಂದು ಕೋಡಿಮಠದ ಶ್ರೀಗಳು ಈ ಸಂದರ್ಭದಲ್ಲಿ ಆಶಯ ವ್ಯಕ್ತಪಡಿಸಿದರು.