ಡೈಲಿ ವಾರ್ತೆ : 01 ಆಗಸ್ಟ್ 2022

ಬೆಂಗಳೂರು: ಕರಾವಳಿಯಲ್ಲಿ ಇತ್ತೀಚೆಗೆ ಹತ್ಯೆಯಾದ ಬೆಳ್ಳಾರೆಯ ಮಸೂದ್ ಮತ್ತು ಸುರತ್ಕಲ್ ನ ಫಾಝಿಲ್ ನಿವಾಸಗಳಿಗೆ ಆದಷ್ಟು ಬೇಗ ಭೇಟಿ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೂದ್ ಹಾಗೂ ಫಾಝೀಲ್ ಮನೆಗೆ ಸಿಎಂ ಭೇಟಿ ನೀಡುತ್ತೇನೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಪ್ರಗತಿಯ ಹಂತದಲ್ಲಿದೆ. ಆದಷ್ಟು ಬೇಗನೇ ಕೊಲೆಗಡುಕರ ಪತ್ತೆಯಾಗಲಿದೆ. ಇನ್ನೊಂದೆರಡು ಮೂರು ದಿನಗಳಲ್ಲಿ ಪ್ರಕರಣವನ್ನು ಎನ್ ಐಎ ಗೆ ವರ್ಗಾವಣೆ ಮಾಡುತ್ತೇವೆ. ತಾಂತ್ರಿಕ ಮತ್ತು ಪೇಪರ್ ವರ್ಕ್ ನಡೆಯುತ್ತಿದೆ. ಆದಷ್ಟು ಬೇಗ ಪ್ರಕರಣ ವರ್ಗಾವಣೆ ಮಾಡುತ್ತೇವೆ ಎಂದರು.


ತನಿಖೆ ಪ್ರಗತಿಯಲ್ಲಿದೆ. ತನಿಖೆಯಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ. ಖಂಡಿತವಾಗಿಯೂ ಪೊಲೀಸರು ಕೊಲೆಗಡುಕರನ್ನು ಪತ್ತೆಹಚ್ಚಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎರಡು ಮೂರು ದಿನಗಳಲ್ಲಿ ಎನ್ ಐಎಗೆ ವಹಿಸಲಾಗುವುದು. ಯುಎಪಿಎಯಡಿ ಪ್ರಕರಣ ದಾಖಲಿಸಬೇಕಿರುವುದರಿಂದ ಅದರ ಪ್ರಕ್ರಿಯೆ ನಡೆಯುತ್ತಿದೆ. ಅನೌಪಚಾರಿಕವಾಗಿ ಈಗಾಗಲೇ ಎನ್ ಐಎಗೆ ತಿಳಿಸಿದ್ದೇವೆ. ಅವರ ತಂಡ ಕೇರಳ ಮತ್ತು ಮಂಗಳೂರಿಗೆ ಭೇಟಿ ನೀಡಿ ಪ್ರಾಥಮಿಕ ಮಾಹಿತಿಯನ್ನು ಕಲೆ ಹಾಕಿದೆ ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ತಿಳಿಸಿದರು.


ಇತ್ತೀಚೆಗೆ ಸಿಎಂ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದಾಗ ಪ್ರವೀಣ್ ಅವರ ನಿವಾಸಕ್ಕೆ ಮಾತ್ರ ಭೇಟಿ ನೀಡಿ ತೆರಳಿದ್ದರು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.