ಡೈಲಿ ವಾರ್ತೆ: 03/ಮೇ /2024

ಹಾಸನ: ಕೆರೆ ಮೀನು ತಿಂದು ಇಬ್ಬರ ಸಾವು, 15ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಹಾಸನ: ಅರಕಲಗೂಡು ತಾಲೂಕಿನ ಬಸವನಹಳ್ಳಿ ಕೆರೆ ಮೀನು  ತಿಂದು ಇಬ್ಬರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ಶುಕ್ರವಾರ ನಡೆದಿದೆ.

ಮೃತರು ಬಸವಹಳ್ಳಿ ಗ್ರಾಮದ ರವಿಕುಮಾರ್ (46), ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸನ್ಯಾಸಿಪುರದ ಪುಟ್ಟಮ್ಮ (50) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.

ಅಸ್ವಸ್ಥರನ್ನು ಅರಕಲಗೂಡು ಹಾಗೂ ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಸವನಹಳ್ಳಿ ಗ್ರಾಮದ ಕೆರೆ ನೀರಿಲ್ಲದೆ ಬತ್ತಿ ಹೋಗಿದೆ. ಖಾಲಿಯಾಗಿದ್ದ ಕೆರೆಯ ಕೆಸರಿನಲ್ಲಿದ್ದ ಮೀನುಗಳನ್ನ ಹಿಡಿದು ಅಡುಗೆ ಮಾಡಿ ಊಟ ಮಾಡಿದ್ದಾರೆ. ಬಳಿಕ ವಾಂತಿ, ಭೇದಿಯಿಂದ ಬಳಲಿ 15ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. ಮೃತ ಪುಟ್ಟಮ್ಮ ಬಸವನಹಳ್ಳಿ ಗ್ರಾಮದಲ್ಲಿರುವ ತವರು ಮನೆಗೆ ಬಂದಿದ್ದರು. ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.