ಡೈಲಿ ವಾರ್ತೆ : 30 ಆಗಸ್ಟ್ 2022

ಬಿಎಂಟಿಸಿ ಚಾಲಕನೊಬ್ಬ ಬಸ್‌ ಡಿಪೋ ಆವರಣದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ..!

ಬೆಂಗಳೂರು : ಬಿಎಂಟಿಸಿ ಚಾಲಕನೊಬ್ಬ ಬಸ್‌ ಡಿಪೋ ಆವರಣದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಿಎಂಟಿಸಿ ಚಾಲಕ ಹೊಳೆಬಸಪ್ಪ (49) ಮೃತ ಚಾಲಕ. ರಾಜರಾಜೇಶ್ವರಿ ನಗರದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಡಿಪೋ 21 ರಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮವಾರ ಬೆಳಗ್ಗೆ ಕರ್ತವ್ಯ ನಿರ್ವಹಿಸಲು ಡಿಪೋಗೆ ಬಂದಿರುವ ಹೊಳೆ ಬಸಪ್ಪ, ಕರ್ತವ್ಯಕ್ಕೆ ಹಾಜರಾಗದೇ, ಡಿಪೋ ಆವರಣದಲ್ಲಿರುವ ಡೀಸೆಲ್‌ ಬಂಕ್‌ ಹಿಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನ 12.20ರ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಪೋ ಮೇಲಾಧಿಕಾರಿಗಳ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ರಜಾ ಮತ್ತು ನಾನಾ ಕಾರಣಗಳಿಂದ ಡಿಪೋ ಮ್ಯಾನೇಜರ್ ನನಗೆ ಕಿರುಕುಳ ನೀಡ್ತಿದ್ರು ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ರಾಜರಾಜೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಡುವೆ ಪತ್ನಿ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.