ಡೈಲಿ ವಾರ್ತೆ : 30 ಆಗಸ್ಟ್ 2022

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರದ ವತಿಯಿಂದ ಮಾದಕ ದ್ರವ್ಯಗಳ ಸಹಿತ ಅಕ್ರಮ ಚಟುವಟಿಕೆಗಳ ವಿರುದ್ಧ ಜನಜಾಗೃತಿಗಾಗಿ “ಉಲಮಾ ಉಮರಾ ಕಾನ್ಫರೆನ್ಸ್”

ಬಂಟ್ವಾಳ, ಆ.30: ತಮಗೆ ಅರಿವಿಲ್ಲದೆ ದುಶ್ಚಟಗಳ ದಾಸರಾಗಿ ಹಾದಿ ತಪ್ಪುತ್ತಿರುವ ಯುವ ಸಮುದಾಯವನ್ನು ಸರಿದಾರಿಗೆ ತರಲು ಉಲಮಾ, ಉಮರಾಗಳು ಒಂದಾಗಿ ಶ್ರಮಿಸಬೇಕು ಎಂದು ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷ ಸಯ್ಯದುಲ್ ಉಲಮಾ ಶೈಖುನಾ ಮುಹಮ್ಮದ್ ಜಿಫ್ರೀ ಮುತ್ತು ಕೋಯ ತಂಙಳ್ ಕರೆ ನೀಡಿದರು.

ಮಾದಕ ದ್ರವ್ಯಗಳ ಸಹಿತ ಅಕ್ರಮ ಚಟುವಟಿಕೆಗಳ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರದ ವತಿಯಿಂದ ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ಸಭಾ ಸಭವನದಲ್ಲಿ ಮಂಗಳವಾರ ಹಮ್ಮಿಕೊಂಡ ‘ಉಲಮಾ ಉಮರಾ ಕಾನ್ಫರೆನ್ಸ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನನ್ನು ದಾರಿ ತಪ್ಪಿಸುವ ಕೆಲಸ ಆದಿ ಮಾನವನ ಕಾಲದಲ್ಲೇ ನಡೆದಿದ್ದು ದಾರಿ ತಪ್ಪಿದವರನ್ನು ಸರಿ ದಾರಿಗೆ ತರುವ ಕೆಲಸ ಸುಸೂಕ್ತವಾಗಿ ಆಗಬೇಕಿದೆ. ಕಠಿಣ ಕ್ರಮಗಳ ಮೂಲಕ ಯುವ ಜನಾಂಗವನ್ನು ಬದಲಾವಣೆ ಮಾಡುವುದು ಅಸಾಧ್ಯ. ಜಾಗೃತಿ, ಅರಿವು, ಸಾದಕ ಬಾದಕಗಳ ಬಗ್ಗೆ ಮನವರಿಕೆ ಮಾಡಿಕೊಡುವ ಮೂಲಕ ಬದಲಾವಣೆ ಸಾಧ್ಯ. ಈ ನಿಟ್ಟಿನಲ್ಲಿ ಉಲಮಾ ಉಮರಾಗಳು ಶಕ್ತಿ ಮೀರಿ ಕಾರ್ಯಪ್ರವೃತ್ತರಾಗಿ ಎಂದು ಅವರು ತಿಳಿಸಿದರು.

ಸಮಾಜದಲ್ಲಿ ನಡೆಯುವ ಪ್ರತಿಯೊಂದು ಕೆಡುಕಿನ ವಿರುದ್ಧ ಧಾರ್ಮಿಕ ಮತ್ತು ಸಾಮಾಜಿಕ‌ ನಾಯಕರು ಒಗ್ಗಟ್ಟಾಗಿ ಜೊತೆ ಜೊತೆಯಾಗಿ ಕೆಲಸ ಮಾಡಬೇಕು. ಇದರಿಂದ ಸಾಮಾಜಿಕ ಕೆಡುಕುಗಳಿಂದ ಸಮಾಜವನ್ನು ಬದಲಾಯಿಸಲು ಸಾಧ್ಯ. ಧಾರ್ಮಿಕ ವಸ್ತ್ರ ಧರಿಸಿ ಜನರಿಗೆ ಬೋಧಿಸಿದ ಮಾತ್ರಕ್ಕೆ ಯಾರೂ ಉಲಮಾ ಆಗಲಾರರು. ಧಾರ್ಮಿಕ ಪಂಡಿತರು ಧರ್ಮದ ಚೌಕಟ್ಟನ್ನು ಅಣುವಿನಷ್ಟು ಮೀರಿ ನಡೆಯಬಾರದು . ಹೀಗಾದರೆ ಮಾತ್ರ ಸಾಮಾಜಿಕ ನಾಯಕರು ನಮ್ಮೊಂದಿದೆ ಕೈ ಜೋಡಿಸಲಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರ ಅಧ್ಯಕ್ಷ ಸಯ್ಯದ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಮಾತನಾಡಿ ಶಾಲಾ ಕಾಲೇಜಿಗೆ ಹೋಗುವ ತಮ್ಮ ಮಕ್ಕಳ ಮೇಲೆ‌ ಅವರಿಗೆ ಅರಿವಿಲ್ಲದಂತೆ ಪೋಷಕರು ನಿಗಾ ವಹಿಸಬೇಕು. ಅವರ ಬ್ಯಾಗ್ ಗಳನ್ನು ಪರಿಶೀಲನೆ ನಡೆಸುತ್ತಾ ಇರಬೇಕು. ಪ್ರತಿದಿನ ಸರಿಯಾಗಿ ಶಾಲೆಗೆ ಮತ್ತು ಮನೆಗೆ ತಲುಪಿದ್ದಾರೊ ಎಂದು ಖಚಿತ ಪಡಿಸಿ. ದುಶ್ಚಟಗಳ ದಾಸರಾಗದಂತೆ ಸರ್ವ ರೀತಿಯಲ್ಲಿ ಜಾಗೃತಿ ವಹಿಸಿ ಮಕ್ಕಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕೆ.ಎಂ.ಇಬ್ರಾಹೀಂ ಬಾಖವಿ ಕೆ.ಸಿ.ರೋಡ್ ದ್ವಜಾರೋಹಣ ಗೈದರು. ಅಹ್ಮದ್ ಪೂಕೋಯ ತಂಙಳ್ ದುಅ ನೆರವೇರಿಸಿದರು. ಸಮಸ್ತ ಕರ್ನಾಟಕ ಮುಶಾವರ ಪ್ರಧಾನ ಕಾರ್ಯದರ್ಶಿ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಪ್ರಾಸ್ತಾವಿಕ ಭಾಷಣ ಮಾಡಿದರು. ಸಯ್ಯದ್ ಝೈನುಲ್ ಅಬಿದೀನ್ ತಂಙಳ್ ಬೆಳ್ತಂಗಡಿ ಮುಶಾವರದ ಮುಂದಿನ ಕಾರ್ಯ ಯೋಜನೆ ಬಗ್ಗೆ ಮಾಹಿತಿ ನೀಡಿದರು. ರಫೀಬ್ ಝಕರಿಯಾ ಫೈಝಿ ಕೋಝಿಕೋಡ್ ವಿಷಯ ಮಂಡನೆ ಮಾಡಿದರು.

ಕಾರ್ಯಕ್ರಮ ಸಂಘಟನೆಯ ಪ್ರಮುಖರಾದ ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಅಬೂಬಕ್ಕರ್ ಸಿದ್ದೀಕ್ ದಾರಿಮಿ ಕಡಬ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಖಾಸಿಂ ದಾರಿಮಿ ನಂದಾವರ ಉಪಸ್ಥಿತರಿದ್ದರು. ಕೆ.ಎಂ.ಉಸ್ಮಾನ್ ಫೈಝಿ ತೋಡಾರ್ ಸ್ವಾಗತಿಸಿ, ಕೆ.ಪಿ‌.ಎಂ. ಶರೀಫ್ ಪೈಝಿ ಕಡಬ ಧನ್ಯವಾದಗೈದರು.

*ಭಯೋತ್ಪಾದನೆ, ಕೋಮುವಾದ, ಉಗ್ರಗಾಮಿತ್ವ ಕಲಿಸಲಾಗುತ್ತಿದೆ ಎಂದು ಮದರಸ ಶಿಕ್ಷಣದ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಅಪಪ್ರಚಾರ ಕೇವಲ ರಾಜಕೀಯ ಪ್ರಚಾರದ ಗಿಮಿಕ್ ಅಷ್ಟೇ. ಮದರಸ ಶಿಕ್ಷಣ ಒಂದು ತೆರೆದ ಪುಸ್ತಕವಾಗಿದೆ. ಅದನ್ನು ಯಾರು ಬೇಕಾದರೂ ಓದಬಹುದು. ಅದ್ಯಾಯನ, ಪರಿಶೀಲನೆ ಮಾಡಬಹುದು. ಈ ಸತ್ಯ ಬಹು ಶೇಕಡಾ ಜನರಿಗೆ ತಿಳಿದಿದೆ. ಭಾರತ ಸರ್ವ ಜನಾಂಗ, ಜಾತಿ, ಧರ್ಮಗಳ ದೇಶವಾಗಿದ್ದು ಪ್ರತಿಯೊಂದು ಧರ್ಮಗಳ ಜನರಿಂದ ದೇಶದ ಕಲ್ಯಾಣಕ್ಕೆ ಕೊಡುಗೆ ಇದೆ.*

*ಜಿಫ್ರೀ ಮುತ್ತು ಕೋಯ ತಂಙಳ್ ಸಮಸ್ತ ಅಧ್ಯಕ್ಷರು*