ಡೈಲಿ ವಾರ್ತೆ: 01 ಅಕ್ಟೋಬರ್ 2022

ದಕ್ಷಿಣ ಕನ್ನಡ :ಬೇರೆಯವರ ಪಾಸ್ ಪೋರ್ಟ್ ದುರುಪಯೋಗ : ಆರೋಪಿಗೆ 1 ವರ್ಷ ಜೈಲು ಶಿಕ್ಷೆ

ಮಂಗಳೂರು : ಬೇರೆಯವರ ಪಾಸ್‌ಪೋರ್ಟ್‌ ಬಳಸಿ ವಿದೇಶಕ್ಕೆ ತೆರಳಲು ಪ್ರಯತ್ನಿಸಿದ ಆರೋಪಿಗೆ ಮಂಗಳೂರು ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.

ಅಪರಾಧಿಯನ್ನು ಬಂಟ್ವಾಳ ಸರಪಾಡಿ ಗ್ರಾಮದ ನಿವಾಸಿ ಬದ್ರುದ್ದೀನ್ ಎಂದು ಗುರುತಿಸಲಾಗಿದೆ.

ಈತ 2010ರ ಫೆ. 02ರಂದು ಹಸೈನಾರ್‌ ಎಂಬವರಿಗೆ ಸೇರಿದ ಪಾಸ್‌ಪೋರ್ಟ್‌ನಲ್ಲಿ ದುಬೈಗೆ ಹೋಗಲು ಯತ್ನಿಸಿದ್ದು, ಈ ಪಾಸ್‌ಪೋರ್ಟ್ ಅನ್ನು ಅಬ್ಬಾಸ್ ಅವರು ಬದ್ರುದ್ದೀನ್‌ಗೆ ನೀಡಿದ್ದರು.

ಈ ಕುರಿತು ಎಮಿಗ್ರೇಷನ್‌ ಅಧಿಕಾರಿ ಕೆ.ಎಂ. ಚಂದ್ರಶೇಖರ್‌ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಬಜಪೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶೆ ಶಿಲ್ಪಾ ಅವರು ಸೆ. 28ರಂದು 1ನೇ ಆರೋಪಿ ಬದ್ರುದ್ದೀನ್‌ಗೆ 1 ವರ್ಷ ಜೈಲು ಮತ್ತು 15 ಸಾವಿರ ರೂ. ದಂಡವನ್ನು ವಿಧಿಸಿದ್ದು, 2ನೇ ಆರೋಪಿ ಬಂಟ್ವಾಳ ಮಂಚಿ ಗ್ರಾಮದ ಅಬ್ಬಾಸ್‌ ಅವರನ್ನು ಖುಲಾಸೆಗೊಳಿಸಿದ್ದಾರೆ.