ಡೈಲಿ ವಾರ್ತೆ: 29 ನವಂಬರ್ 2022

ರಾಜ್ಯದಲ್ಲಿ 10 ಪ್ರತ್ಯೇಕ ಮುಸ್ಲಿಮ್ ಹೆಣ್ಣು ಮಕ್ಕಳ ಕಾಲೇಜು ಸ್ಥಾಪನೆಗೆ ರಾಜ್ಯ ಸರಕಾರದಿಂದ ಅನುಮೋದನೆ

ಬೆಂಗಳೂರು: ಕಲಬುರಗಿ, ಯಾದಗರಿ, ರಾಯಚೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ 10 ಸರ್ಕಾರಿ ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯ ವಕ್ಫ್ ಬೋರ್ಡ್ ಮುಸ್ಲಿಂ ಹೆಣ್ಣುಮಕ್ಕಳಿಗಾಗಿಯೇ ಪ್ರತ್ಯೇಕ 10 ಕಾಲೇಜುಗಳನ್ನು ಸ್ಥಾಪಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಒಂದೂವರೆ ತಿಂಗಳ ಹಿಂದೆ ಸರ್ಕಾರದಿಂದ ಇದಕ್ಕೆ ಅನುಮೋದನೆಯೂ ಸಿಕ್ಕಿತ್ತು. ಪ್ರತಿ ಕಾಲೇಜಿಗೆ 2.5 ಕೋಟಿ ರೂ. ಅನುದಾನವನ್ನೂ ಮೀಸಲಿರಿಸಲಾಗಿದೆ.


ಉಡುಪಿಯಿಂದ ಆರಂಭವಾದ ಹಿಜಾಬ್ ವಿವಾದ ರಾಜ್ಯಾದ್ಯಂತರ ಆರಂಭವಾಗಿತ್ತು. ಹಿಜಾಬ್ ವಿರುದ್ಧ ಸ್ವತಃ ಬಿಜೆಪಿ ಶಾಸಕರು, ಸಚಿವರೇ ತಿರುಗಿ ನಿಂತಿದ್ದರು. ಬಿಜೆಪಿ ಪರ ಸಂಘಟನೆಗಳು ಈ ವಿಚಾರವನ್ನು ದೊಡ್ಡ ವಿವಾದವಾಗಿ ಮಾರ್ಪಡಿಸಲು ಯಶಸ್ವಿಯಾಗಿತ್ತು. ಒಂದೆಡೆ ಕೋರ್ಟ್ ನಲ್ಲಿ ಹಿಜಾಬ್ ಪರ ಹೋರಾಟ ಮಾಡಿದ ವಿದ್ಯಾರ್ಥಿನಿಯರಿಗೆ ಸೋಲಾದಾಗ ಇದು ನಮಗೆ ಸಿಕ್ಕ ಗೆಲುವು ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು.


ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಕಣ್ಣೂರು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಕಲಬುರಗಿ, ಯಾದಗರಿ, ರಾಯಚೂರು, ಉಡುಪಿ ಜಿಲ್ಲೆ ಸೇರಿದಂತೆ 10 ಕಡೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಕಾಲೇಜು ಸ್ಥಾಪಿಸಲು ಮುಂದಾಗಿದ್ದು, ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ ಅನ್ನೋ ಮಾತುಗಳು ಕೇಳಿ ಬಂದಿದೆ.