ಡೈಲಿ ವಾರ್ತೆ: 12 ಡಿಸೆಂಬರ್ 2022

ಆಸ್ತಿಗಾಗಿ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಪಾಪಿ ಮಕ್ಕಳು: ಆರೋಪಿಗಳ ಬಂಧನ

ಶಿವಮೊಗ್ಗ: ಆಸ್ತಿಗಾಗಿ ಸುಪಾರಿ ಕೊಟ್ಟು ತಂದೆಯನ್ನೇ ಮಕ್ಕಳು ಕೊಲೆ ಮಾಡಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ನಡೆದಿದೆ.

ಕೆಎಸ್‍ಆರ್‌ಪಿಯ ನಿವೃತ್ತ ಎಆರ್‌ಎಸ್‍ಐ ನಾಗೇಂದ್ರಪ್ಪ ಕೊಲೆಯಾದ ವ್ಯಕ್ತಿ. ನಾಗೇಂದ್ರಪ್ಪ ಶಿರಾಳಕೊಪ್ಪದ ಬೋವಿ ಗ್ರಾಮದ ನಿವಾಸಿ ಆಗಿದ್ದ. ಈತನ ಶವ ಶಿರಾಳಕೊಪ್ಪದಲ್ಲಿ ನ. 29 ರಂದು ಚರಂಡಿಯಲ್ಲಿ ಪತ್ತೆ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಶಿರಾಳಕೊಪ್ಪ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ಕೆಲವು ರಹಸ್ಯಗಳು ಬಯಲಾಗಿದೆ.

ನಾಗೇಂದ್ರಪ್ಪಗೆ ಐದೂವರೆ ಎಕರೆ ಭೂಮಿಯಲ್ಲಿ ಐದು ಎಕರೆ ತೋಟವಿದೆ. ಉತ್ತಮ ಫಸಲು ಬರುತ್ತಿದ್ದರಿಂದ ಆದಾಯವೂ ಹೆಚ್ಚಿತ್ತು. ಅಷ್ಟೇ ಅಲ್ಲದೇ ನಾಗೇಂದ್ರಪ್ಪನ ಮೊದಲ ಪತ್ನಿಗೆ ಐವರು ಮಕ್ಕಳಿದ್ದರು. ಮೊದಲ ಪತ್ನಿ ನಿಧನದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ವಿಧವೆಯನ್ನು ನಾಗೇಂದ್ರಪ್ಪ ಮದುವೆಯಾಗಿದ್ದ. ಈ ಮದುವೆಯನ್ನು ಮಕ್ಕಳೇ ನಿಂತು ಮಾಡಿಸಿದ್ದರು.

ಆದರೆ ನಾಗೇಂದ್ರಪ್ಪನ ಮೊದಲ ಪತ್ನಿಯ ಮಕ್ಕಳು ಆಸ್ತಿ ಪಾಲು ಮಾಡುವಂತೆ ಹಿಂದಿನಿಂದಲೂ ಒತ್ತಾಯವಿತ್ತು. ಆದರೆ ನಾಗೇಂದ್ರಪ್ಪ ಆಸ್ತಿ ಪಾಲಿಗೆ ನಿರಾಕರಿಸಿದ್ದ. ಈ ಮಧ್ಯೆ ಎರಡನೇ ಪತ್ನಿಗೂ ಗಂಡು ಮಗು ಜನಿಸಿತ್ತು. ಇದರಿಂದಾಗಿ ನಾಗೇಂದ್ರಪ್ಪನ ಮೊದಲ ಪತ್ನಿಯ ಮಕ್ಕಳಾದ ಮಂಜುನಾಥ್, ಉಮೇಶ್ ಸಿಟ್ಟಾಗಿದ್ದರು. ಆಸ್ತಿ ಕೈ ತಪ್ಪಿ ಹೋಗುತ್ತದೆ ಎಂದು ಅಪ್ಪನನ್ನೇ ಮುಗಿಸಲು ಈ ಇಬ್ಬರು ಮಕ್ಕಳು ಯೋಜನೆ ಹಾಕಿದ್ದಾರೆ. ಯೋಜನೆಯ ಪ್ರಕಾರವಾಗಿಯೇ ಬೋಗಿ ಗ್ರಾಮದ ಮೂವರಿಗೆ ತಂದೆಯ ಕೊಲೆಗೆ ಸುಪಾರಿ ಕೊಟ್ಟು, ಅಪ್ಪನನ್ನು ಕೊಲೆ ಮಾಡಿದರೆ ಐದು ಲಕ್ಷ ಕೊಡುವುದಾಗಿ ವಾಗ್ದಾನ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸುಪಾರಿ ತೆಗೆದುಕೊಂಡ ಬೋವಿ ಗ್ರಾಮದ ರಿಜ್ವಾನ್, ಹಬೀಬುಲ್ಲಾ, ಸುಹೇಲ್ ಮೂವರು ನಾಗೇಂದ್ರಪ್ಪ ಭದ್ರಾವತಿ ಕೋರ್ಟ್‍ಗೆ ಹೋಗಿ ಶಿಕಾರಿಪುರಕ್ಕೆ ಬರುವುದನ್ನು ನೋಡಿದ್ದಾರೆ. ಇದೇ ಸರಿಯಾದ ಸಮಯವೆಂದು ಆರೋಪಿಗಳಾದ ಬೋವಿ ಗ್ರಾಮದ ರಿಜ್ವಾನ್, ಹಬೀಬುಲ್ಲಾ, ಸುಹೇಲ್ ಮೂವರು ನಾಗೇಂದ್ರಪ್ಪನನ್ನು ತಮ್ಮ ಆಟೋದಲ್ಲಿ ಹತ್ತಿಸಿಕೊಂಡಿದ್ದರು

ಅದಾದ ಬಳಿಕ ನಾಗೇಂದ್ರಪ್ಪನನ್ನು ಪುಣೇದಹಳ್ಳಿ ಗ್ರಾಮದ ಬಳಿ ಕರೆದೊಯ್ದಿದ್ದಾರೆ. ಅಲ್ಲಿ ನಾಗೇಂದ್ರಪ್ಪನಿಗೆ ಬಲವಂತದಿಂದ ನಶೆ ಬರುವ ಔಷಧಿ ಕುಡಿಸಿದ್ದಾರೆ. ಅದಾದ ಬಳಿಕ ಉಸಿರುಗಟ್ಟಿಸಿ ಸಾಯಿಸಿ ಅದೇ ಆಟೋದಲ್ಲಿ ಶವ ಸಾಗಿಸಿದ್ದಾರೆ. ಅದಾದ ಬಳಿಕ ಉಡುಗಣಿ ಗ್ರಾಮದಿಂದ ಕುಸೂರು ಗ್ರಾಮಕ್ಕೆ ಹೋಗುವ ಮಣ್ಣಿನ ರಸ್ತೆಯ ಪಕ್ಕದಲ್ಲಿನ ಚರಂಡಿಗೆ ಶವ ಎಸೆದಿದ್ದಾರೆ.

ಘಟನೆಗೆ ಸಂಬಂಧಿಸಿ ಮಕ್ಕಳಾದ ಮಂಜುನಾಥ್, ಉಮೇಶ್‌ನನ್ನು ಹಾಗೂ ಸುಪಾರಿ ತೆಗೆದುಕೊಂಡಿದ್ದ ರಿಜ್ವಾನ್, ಹಬೀಬುಲ್ಲಾ, ಸುಹೇಲ್‌ನನ್ನು ಬಂಧಿಸಿದ್ದಾರೆ.