ಡೈಲಿ ವಾರ್ತೆ:04 ಏಪ್ರಿಲ್ 2023

ಲಾಟರಿಯಲ್ಲಿ 80 ಲಕ್ಷ ರೂ. ಗೆದ್ದ ಸಂತಸದಲ್ಲಿ ಪಾರ್ಟಿ ಮಾಡುತ್ತಿದ್ದ ವ್ಯಕ್ತಿ ಮೃತ್ಯು

ತಿರುವನಂತಪುರಂ: ಲಾಟರಿ ಹಣ ಗೆದ್ದು ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ನಿಗೂಢವಾಗಿ ಮೃತಪಟ್ಟಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿರುವ ಪಂಗೋಡ್ ನಲ್ಲಿ ನಡೆದಿದೆ. ಸಜೀವ್ (35) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಕೇರಳ ರಾಜ್ಯ ಲಾಟರಿಯಲ್ಲಿ ಸಜೀವ್ ಅವರಿಗೆ 80 ಲಕ್ಷ ರೂ. ಬಂದಿದೆ. ಇದೇ ಸಂತಸದಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮಾಡುತ್ತಿದ್ದ ವೇಳೆ ಎಲ್ಲರೂ ಮದ್ಯದ ನಶೆಯಲ್ಲಿದ್ದರು. ಈ ವೇಳೆ ಸಂತೋಷ್ ಎಂಬ ವ್ಯಕ್ತಿ ಸಜೀವ್ ಅವರನ್ನು ತಳ್ಳಿದ್ದಾರೆ. ಪರಿಣಾಮ ಸಜೀವ್ , ರಬ್ಬರ್ ತೋಟದ ಆಳದ ಹೊಂಡಕ್ಕೆ ಬಿದ್ದಿದ್ದಾರೆ. ಆ ಬಳಿಕ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಸೋಮವಾರ ಸಂಜೆ ಅವರು ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

ಈ ಬಗ್ಗೆ ಕೇಸ್ ದಾಖಲಿಸಿದ್ದು ಸಾವಿಗೆ ನಿಖರ ಕಾರಣವೇನೆಂಬುದು ಮರಣೋತ್ತರ ಪರೀಕ್ಷೆ ಬಳಿಕವೆ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.