ಡೈಲಿ ವಾರ್ತೆ:29 ಜುಲೈ 2023

ಅರಶಿನಗುಂಡಿ ಜಲಪಾತ ದುರಂತ ಐದನೇ ದಿನವೂ ಹುಡುಕಾಟ; ಸಿಗದ ಸುಳಿವು!

ಕೊಲ್ಲೂರು: ಕೊಲ್ಲೂರು ಸಮೀಪದ ಅರಶಿನ ಗುಂಡಿ ಜಲಪಾತದಲ್ಲಿ ಕಳೆದ ರವಿವಾರ ಕಾಲು ಜಾರಿ ಬಿದ್ದು ನೀರುಪಾಲಾದ ಭದ್ರಾವತಿಯ ಶರತ್‌ ಕುಮಾರ್‌ (23) ಅವರ ಪತ್ತೆಗಾಗಿ 5ನೇ ದಿನವೂ ಹುಡುಕಾಟ ನಡೆಯಿತು. ಆದರೆ ಯಾವುದೇ ಸುಳಿವು ಲಭ್ಯವಾಗಿಲ್ಲ.

ಕಳೆದ 5 ದಿನಗಳಿಂದಲೂ ಕೊಲ್ಲೂರು ಪೊಲೀಸರು, ರಾಜ್ಯ ವಿಪತ್ತು ನಿರ್ವಹಣ ತಂಡ (ಎಸ್‌ಡಿಆರ್‌ಎಫ್‌), ಅರಣ್ಯ ಇಲಾಖೆ ಸಿಬಂದಿ, ಅಗ್ನಿ ಶಾಮಕ ದಳದ ಸಿಬಂದಿ, ಸ್ಥಳೀಯರು, ಶರತ್‌ ಅವರ ಸ್ನೇಹಿತರು, ಸಂಬಂಧಿಕರು ಪ್ರತೀ ದಿನ ಹಗಲಿಡೀ ನಿರಂತರ ಹುಡುಕಾಟ ನಡೆಸುತ್ತಿದ್ದಾರೆ.
ಡ್ರೋಣ್‌ ಬಳಕೆ:
ಶುಕ್ರವಾರವೂ ಶರತ್‌ ಪತ್ತೆಗಾಗಿ ಜಲಪಾತ ಹರಿದು ಬರುವ ಬೇರೆ ಬೇರೆ ಕಡೆಗಳಲ್ಲಿ ಸಾಗರ ಬಾರಕೂರು ಅವರ ನೇತೃತ್ವದಲ್ಲಿ ಡ್ರೋನ್‌ ಕೆಮರಾದ ಮೂಲಕ ಹುಡುಕುವ ಪ್ರಯತ್ನ ಮಾಡಲಾಯಿತು. ಗುರುವಾರವು ಡ್ರೋನ್‌ ಕೆಮರಾ ಮೂಲಕ ಪತ್ತೆಗಾಗಿ ಪ್ರಯತ್ನಿಸಲಾಗಿತ್ತು.

ಯುವಕನ ಸುಳಿವು ಸಿಕ್ಕಿಲ್ಲ:
ಜು. 23ರಂದು ಮನೆಯಿಂದ ಹೊರಟು ನಾಪತ್ತೆಯಾಗಿರುವ ಜಡ್ಕಲ್‌ ಗ್ರಾಮದ ಮೆಕ್ಕೆ ಕೊಳಕೆಹೊಳೆ ನಿವಾಸಿ ಸುರೇಶ (28) ಅವರ ಬಗ್ಗೆಯೂ ಈವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಹಲವು ಆಯಾಮಗಳಲ್ಲಿ ಪೊಲೀಸರು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ.