ಡೈಲಿ ವಾರ್ತೆ: 29/ಮೇ /2024

ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಪುತ್ರನ ಬೆಂಗಾವಲು ವಾಹನ ಬೈಕ್‌ಗೆ ಡಿಕ್ಕಿ: ಇಬ್ಬರು ಯುವಕರು ಮೃತ್ಯು!

ಲಕ್ನೋ: ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಅವರ ಪುತ್ರ ಕರಣ್‌ ಭೂಷಣ್‌ ಸಿಂಗ್‌  ಅವರ ಬೆಂಗಾವಲು ಪಡೆಗೆ ಸೇರಿದ ಟೊಯೊಟಾ ಫಾರ್ಚುನರ್ ಎಸ್‌ಯುವಿ  ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 17 ವರ್ಷದ ಓರ್ವ ಸೇರಿದಂತೆ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗೋಂಡಾದಲ್ಲಿ ನಡೆದಿದೆ.

ಬುಧವಾರ (ಇಂದು) ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ರೇಹಾನ್‌ (17) ಮತ್ತು ಶಹಜಾನ್‌ (24) ಎಂಬ ಯುವಕರು ಔಷಧಿ ಖರೀದಿಸಲು ಬೈಕ್‌ ನಲ್ಲಿ ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಎಸ್‌ಯುವಿ ಡಿಕ್ಕಿ ಹೊಡೆದಿದೆ. ಬಳಿಕ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಜನರು ಜಮಾಯಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮೃತರ ತಾಯಿ ಚಂದಾ ಬೇಗಂ ಎಂಬವರು ದೂರು ದಾಖಲಿಸಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನನ್ನ ಬಂಧಿಸಿ, ಎಸ್‌ಯುವಿ ಅನ್ನು ವಶಪಡಿಸಿಕೊಂಡಿದ್ದಾರೆ. ಆದ್ರೆ ಅಪಘಾತ ಸಂದರ್ಭದಲ್ಲಿ ಕರಣ್‌ ಭೂಷಣ್‌ ಸಿಂಗ್‌ ಪ್ರಯಾಣಿಸುತ್ತಿದ್ದರೇ ಅನ್ನೂ ಬಗ್ಗೆ ಸ್ಪಷ್ಟನೆ ಇಲ್ಲ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಧೇಶ್ಯಾಮ್ ರೈ ತಿಳಿಸಿದ್ದಾರೆ.