


ಡೈಲಿವಾರ್ತೆ: 06/ಜು./2026


ಸುಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿ ಮನ ಗೆದ್ದ ‘ವಾಲ್ಬೆಲ್ಲ’: ಕುಂದಾಪ್ರ ಕನ್ನಡದ ಉಳಿವಿಗಾಗಿ ಜಂಟಿ ಹೆಜ್ಜೆ: ಕುಂದಾಪ್ರ ಕನ್ನಡದ ಸೊಗಡನ್ನು ಉಳಿಸಿ ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಮ್ಮ ಮೇಲಿದೆ – ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ

ಕುಂದಾಪುರ: ನಮ್ಮ ಹೆಮ್ಮೆಯ ಹಳ್ಳಿ ಭಾಷೆಯಾದ ಕುಂದಾಪ್ರ ಕನ್ನಡ ಕೇವಲ ಮಾತನಾಡುವ ಮಾಧ್ಯಮವಲ್ಲ, ಅದು ನಮ್ಮ ಸಂಸ್ಕೃತಿ, ಬದುಕು ಮತ್ತು ಪರಂಪರೆಯ ಪ್ರತಿಬಿಂಬ. ಇಂದಿನ ಆಧುನಿಕ ಯುಗದಲ್ಲಿ ಇಂಗ್ಲಿಷ್, ಶುದ್ಧ ಕನ್ನಡ ಕಲಿಯುವುದರ ಜೊತೆಗೆ, ನಮ್ಮ ಮಣ್ಣಿನ ಭಾಷೆಯಾದ ಕುಂದಾಪ್ರ ಕನ್ನಡವನ್ನು ಮನೆಯಲ್ಲಿ ಸದಾ ಬಳಸುವ ಮೂಲಕ ಅದನ್ನು ಜೀವಂತವಾಗಿರಿಸಬೇಕು ಎಂದು ಮಾಜಿ ಸಚಿವರು ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಪೋಷಕರಾದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮಾರ್ಮಿಕವಾಗಿ ನುಡಿದರು.

ಅವರು ಯಡಾಡಿ ಮತ್ಯಾಡಿಯ ಸುಜ್ಞಾನ ಪದವಿಪೂರ್ವ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಜಂಟಿ ಆಶ್ರಯದಲ್ಲಿ ವಿದ್ಯಾರಣ್ಯ ಶಾಲಾ ಆವರಣದಲ್ಲಿ ಜುಲೈ 06ರಂದು ಸೋಮವಾರ ಕುಂದಾಪ್ರ ಕನ್ನಡ ಭಾಷಿಕ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಹಾಗೂ ಚಿತ್ರಕಲಾ ಸ್ಪರ್ಧೆ ‘ವಾಲ್ಬೆಲ್ಲ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಮ್ಮ ಭಾಷಣದಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ಇಂದಿನ ತಲೆಮಾರಿನ ಮಕ್ಕಳಿಗೆ ಹಳ್ಳಿಯ ಸೊಗಡನ್ನು ಪರಿಚಯಿಸುವ ಅಗತ್ಯವನ್ನು ಒತ್ತಿ ಹೇಳಿದರು. ಇವತ್ತಿನ ಮಕ್ಕಳು ಮೊಬೈಲ್, ಡಿಜಿಟಲ್ ಲೋಕದಲ್ಲಿ ಮುಳುಗುವ ಬದಲು ಹಳ್ಳಿಯ ಮನೆಗಳಿಗೆ ಹೋಗಿ ಅಜ್ಜಿ-ತಾತನ ಹತ್ತಿರ ಕೂತು ಮಾತಾಡಬೇಕು. ಆಗ ಅವರು ಹಳೆಯ ಕಾಲದ ಅಪರೂಪದ ಕಥೆಗಳನ್ನು, ಭತ್ತದ ನಾಟಿ, ಕೊಯ್ಲು, ಕೃಷಿ ಪದ್ಧತಿ ಮತ್ತು ಗದ್ದೆ ಹೂಡುವ ಕಲೆಗಳ ಬಗ್ಗೆ ವಿವರಿಸುತ್ತಾರೆ. ಆ ಹಳೆಯ ನೆನಪುಗಳು ಮುಂದಿನ ಪೀಳಿಗೆಗೆ ಸಿಗದೇ ಹೋದರೆ ನಮ್ಮ ಅಸ್ತಿತ್ವಕ್ಕೇ ಧಕ್ಕೆಯಾಗುತ್ತದೆ ಎಂದರು.

ಇವತ್ತಿನ ಈ ಕಾರ್ಯಕ್ರಮಕ್ಕೆ ಸುಜ್ಞಾನ ಶಿಕ್ಷಣ ಸಂಸ್ಥೆಯವರೇ ಸಂಪೂರ್ಣ ವೆಚ್ಚವನ್ನು ಭರಿಸಿದ್ದು, ಸರ್ಕಾರದ ಹಣವನ್ನು ಆಶ್ರಯಿಸದೇ ಸ್ವಂತ ಆಸಕ್ತಿಯಿಂದ ಭಾಷಾ ಪ್ರೇಮ ಮೆರೆದಿದ್ದಾರೆ ಎಂದು ಶ್ಲಾಘಿಸಿದರು. ಅಲ್ಲದೆ
ಕುಂದಾಪ್ರ ಕನ್ನಡದ ಕುರಿತು ಪಿಎಚ್.ಡಿ (PhD) ಮಾಡಲು ಮುಂದೆ ಬರುವ ಆಸಕ್ತ ಸಂಶೋಧಕರಿಗೆ ಹಾಗೂ ಪುಸ್ತಕ ಬರೆಯುವ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೀಠದ ವತಿಯಿಂದ ಎಲ್ಲ ರೀತಿಯ ಆರ್ಥಿಕ ಹಾಗೂ ಪ್ರಾಯೋಗಿಕ ಸಹಕಾರ ನೀಡಲಾಗುವುದು ಎಂದು ಪ್ರಕಟಿಸಿದರು.
ವ್ಯಕ್ತಿತ್ವದ ಗಟ್ಟಿತನಕ್ಕೆ ನೆಲ, ನುಡಿ, ಸಂಸ್ಕೃತಿಯೇ ಆಧಾರ: ಅಶ್ವಿನಿ ಗೌಡ

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಖ್ಯಾತ ಚಿತ್ರನಟಿ ಹಾಗೂ ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ ಮಾತನಾಡಿ ಮನುಷ್ಯ ತಾನು ಎಲ್ಲೇ ಹೋದರೂ ತನ್ನ ಹುಟ್ಟಿದ ನೆಲ, ಆಡುವ ನುಡಿ ಮತ್ತು ಹೆಮ್ಮೆಯ ಸಂಸ್ಕೃತಿಯನ್ನು ಹೃದಯದಲ್ಲಿ ಹೊತ್ತು ಸಾಗಬೇಕು. ಆಗ ಮಾತ್ರ ವ್ಯಕ್ತಿತ್ವಕ್ಕೆ ನಿಜವಾದ ಗೌರವ ಸಿಗುತ್ತದೆ ಎಂದರು.
ಬೆಂಗಳೂರಿನಲ್ಲಿ ಇಂಗ್ಲಿಷ್, ಹಿಂದಿ ಪ್ರಭಾವದಿಂದ ಕನ್ನಡದ ಪರಿಸ್ಥಿತಿ ಗಡಗಡ ನಡುಗುವಂತಾಗಿದ್ದರೆ, ಇಲ್ಲಿನ ಕುಂದಾಪ್ರ ಕನ್ನಡದ ಶೈಲಿ, ಜನರ ಆತಿಥ್ಯ ಮತ್ತು ಪರಿಸರ ಅನನ್ಯವಾದದ್ದು ಎಂದು ಕೊಂಡಾಡಿದರು.
ಜೀವನದಲ್ಲಿ ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೆ. ನಾವು ಎಲ್ಲವನ್ನು ಸಾಧಿಸುವ ಛಲ ನಮ್ಮಲ್ಲಿರಬೇಕು. ಮೊಬೈಲ್ ಅನ್ನು ಜ್ಞಾನಕ್ಕಾಗಿ ಬಳಸಿ, ಅದಕ್ಕೆ ದಾಸರಾಗಬೇಡಿ. ಸಮಾಜದಲ್ಲಿ ಕೆಟ್ಟ ಸಹವಾಸದಿಂದ ದೂರವಿದ್ದು, ಒಳ್ಳೆಯ ಸ್ನೇಹಿತರನ್ನು ಆರಿಸಿಕೊಳ್ಳಿ. ಸಮಾಜಸೇವೆಗೆ ಯಾವುದೇ ದೊಡ್ಡ ಪದವಿ ಬೇಕಾಗಿಲ್ಲ, ಮನುಷ್ಯತ್ವ ಒಂದಿದ್ದರೆ ಸಾಕು ಎಂದು ತಮ್ಮ ಜೀವನದಲ್ಲಿ ತಾವು ನಡೆಸಿದ ವೃದ್ಧೆಯೊಬ್ಬರ ರಕ್ಷಣೆಯ ನೈಜ ಘಟನೆಯನ್ನು ಹಂಚಿಕೊಳ್ಳುತ್ತಾ ಭಾವುಕರಾಗಿ ನುಡಿದರು. ಲಕ್ಷಾಂತರ ರೂಪಾಯಿ ಫೀಸ್ ಪಡೆಯುವ ಸಂಸ್ಥೆಗಳ ನಡುವೆ, ಗಳಿಕೆಯ ಒಂದು ಭಾಗವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟ ಸುಜ್ಞಾನ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ಮನೆಗಳಿಂದಲೇ ಆರಂಭವಾಗಲಿ ಭಾಷಾ ಪ್ರೇಮ: ಮೊಳಹಳ್ಳಿ ದಿನೇಶ್ ಹೆಗ್ಡೆ

ಜಯರತ್ನ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷ ಹಾಗೂ ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ ಮಾತನಾಡಿ ನಮ್ಮ ಹೆಮ್ಮೆಯ ತಾಯ್ನುಡಿಯಾದ ಕುಂದಾಪ್ರ ಕನ್ನಡವನ್ನು ಉಳಿಸಿ ಬೆಳೆಸಬೇಕಾದರೆ, ಮೊದಲು ನಾವು ನಮ್ಮ ಮನೆಗಳಲ್ಲಿ ಮಕ್ಕಳೊಂದಿಗೆ ಅದೇ ಭಾಷೆಯಲ್ಲಿ ಮಾತನಾಡಬೇಕು. ಇಂದಿನ ಮಕ್ಕಳು ಇಂಗ್ಲಿಷ್ ಮಾಧ್ಯಮಕ್ಕೆ ಒಗ್ಗಿಹೋಗಿ ತಾಯ್ನುಡಿಯಿಂದ ದೂರವಾಗುತ್ತಿದ್ದು, ಇದನ್ನು ತಡೆಯಲು ಮನೆಗಳಿಂದಲೇ ಭಾಷಾ ಪ್ರೇಮ ಆರಂಭವಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಜ್ಞಾನ ಎಜುಕೇಶನ್ ಟ್ರಸ್ಟ್ (ರಿ.) ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ವಹಿಸಿದ್ದರು.
ಸಂಸ್ಥೆಯ ಕೋಶಾಧಿಕಾರಿ ಭರತ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.



ಇದೇ ಸಂದರ್ಭದಲ್ಲಿ ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ, ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ರಾಜು ಮೊಗವೀರ ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಂಯೋಜಕ ಪ್ರೊ. ನಾಗಪ್ಪಗೌಡ ಆರ್. ಇವರನ್ನು ಅತ್ಯಂತ ಗೌರವದಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಅರುಣ್ ಕುಮಾರ್ ಹೆಗ್ಡೆ, ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಬ್ಲಾಡಿ ಮಂಜಯ್ಯ ಶೆಟ್ಟಿ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ, ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಚಿಟ್ಟೆಬೈಲು ಜಗನ್ನಾಥ ಶೆಟ್ಟಿ, ಕುಂದಾಪ್ರ ಕನ್ನಡ ಪೀಠದ ಸದಸ್ಯರಾದ ಕೆ.ಸಿ. ರಾಜೇಶ್, ಪಡುಕೆರೆ ಉದಯಕುಮಾರ್ ಶೆಟ್ಟಿ, ಜುಡಿತ್ ಮೆಂಡೋನ್ಸಾ ಹಾಗೂ ಡಾ. ರೇಖಾ ಬನ್ನಾಡಿ ಉಪಸ್ಥಿತರಿದ್ದರು.
ಶಿಕ್ಷಕ ಪ್ರಕಾಶ್ ಆಚಾರ್ಯ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿೂಪಿಸಿದರು. ಪ್ರಾಂಶುಪಾಲರಾದ ರಂಜನ್ ಶೆಟ್ಟಿ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು. ನೂರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆದ ಈ ಕಲಾ ಹಬ್ಬವು ತಾಯ್ನುಡಿಯ ಜಾಗೃತಿ ಮೂಡಿಸುವಲ್ಲಿ ಸಂಪೂರ್ಣ ಯಶಸ್ವಿಯಾಯಿತು.