ಡೈಲಿ ವಾರ್ತೆ: 30/ಮೇ /2024

ಮಾಣಿ: ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯ ತಡೆಬೇಲಿಗೆ ಕಾರು ಢಿಕ್ಕಿ!

ಮಾಣಿ: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಕಂಪೆನಿಯು ರಸ್ತೆಗೆ ಬ್ಯಾರಿಕೇಡ್ ತರಹ ಉದ್ದಕ್ಕೆ ನಿರ್ಮಿಸಿದ ಕಬ್ಬಿಣದ ತಡೆಬೇಲಿಗೆ ಬುಧವಾರ ಬೆಳಗ್ಗೆ ಕಾರೊಂದು ಢಿಕ್ಕಿ ಹೊಡೆದು ಸಂಪೂರ್ಣವಾಗಿ ಜಖಂಗೊಂಡಿದೆ. ಘಟನೆಯಲ್ಲಿ ಗಾಯಗೊಂಡವರ ಮಾಹಿತಿ ಲಭ್ಯವಾಗಿಲ್ಲ.

ಬೆಳಗಿನ ಜಾವ ಅತೀವೇಗದಿಂದ ಬಂದ ಕಾರು ಗುದ್ದಿದ ಕಾರಣ ತಡೆಬೇಲಿ ಮತ್ತು ಕಾರು ನಜ್ಜುಗುಜ್ಜಾಗಿದೆ. ಶಾಶ್ವತ ತಡೆಬೇಲಿಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ನಿರ್ಮಾಣ ಕಾರ್ಯದ ಬಗ್ಗೆ ಸಾರ್ವಜನಿಕರು ಇದನ್ನು ವೇಗವಾಗಿ ಬರುವ ಗಾಡಿಗಳು ಸೀಳಿಕೊಂಡು ಹೋಗಬಹುದು ಎಂದು ಮಾತಾಡಿಕೊಂಡಿದ್ದರು. ಉತ್ತಮ ಗುಣಮಟ್ಟದ ಕಾಂಕ್ರೀಟ್ ಬೇಲಿ ನಿರ್ಮಿಸಬಹುದಿತ್ತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿರುವಾಗಲೇ ಅಪಘಾತ ಸಂಭವಿಸಿರುವುದು ಸ್ಪಷ್ಟ ನಿದರ್ಶನವಾಗಿದೆ.