ಡೈಲಿ ವಾರ್ತೆ: 31/ಜುಲೈ /2024

ಕಾವಳಕಟ್ಟೆ : ಮಂಗಳೂರು ಹಿದಾಯ ಫೌಂಡೇಶನ್ ಗ್ಲೋಬಲ್ ಮೀಟ್- 2024

ಬಂಟ್ವಾಳ : ಮಂಗಳೂರಿನ ಹಿದಾಯ ಫೌಂಡೇಶನ್ ಇದರ ವಾರ್ಷಿಕ ಗ್ಲೋಬಲ್ ಮೀಟ್ ಕಾರ್ಯಕ್ರಮವು ಕಾವಳಕಟ್ಟೆ ಹಿದಾಯ ಶೇರ್ ಆಂಡ್ ಕೇರ್ ಕಾಲೋನಿಯಲ್ಲಿ ಮಂಗಳವಾರ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಧಾರ್ಮಿಕ ಉಪನ್ಯಾಸಕ ಎಂ.ಎಸ್.ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಅವರು ಮಾತನಾಡಿ, ಸಮುದಾಯಕ್ಕೆ ಜ್ಞಾನಾಧಾರಿತ ನಾಯಕತ್ವದ ಅವಶ್ಯಕತೆ ಇದ್ದು ಗತಕಾಲದ ಇಸ್ಲಾಂ ವಿದ್ವಾಂಸರು, ಸಂಶೋಧಕರು ಮಾಡಿದ ಸಾಧನೆಯ ಹಾದಿಯಲ್ಲಿ ಸಮುದಾಯ ಸಾಗಿದರೆ ಸಮಾಜದ ಸಮಸ್ಯೆಗಳನ್ನು ಕೊನೆ ಗಾಣಿಸಬಹುದು ಮಾತ್ರವಲ್ಲ
ಮಾದರಿಯಾಗಿ ಬದಲಾಗಬಹುದು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ನನ್ನ ಅಧಿಕಾರಾವಧಿಯಲ್ಲಿ ಸಮಾಜದ ಎಲ್ಲಾ ವರ್ಗದವರಿಗೂ ಯಾವುದೇ ರೀತಿಯ ಭೇದ ಭಾವ ಮಾಡದೇ ನನ್ನಿಂದಾಗುವ ಸಹಾಯ ಮಾಡಿದ್ದು, ಹಿದಾಯ ಫೌಂಡೇಷನ್ ನ ಮುಂದಿನ ಯೋಜನೆಗೂ ನನ್ನಿಂದಾಗುವ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಮಾರಂಭದಲ್ಲಿ ಭಾಗವಹಿಸಿದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಹಿದಾಯ ಫೌಂಡೇಶನ್ ನ ಕಳೆದ 15 ವರ್ಷಗಳ ಶ್ರಮ, ಸೇವೆ ಅಶಕ್ತರಿಗೆ ಶಕ್ತಿಯನ್ನು ತುಂಬುವಂತಾಗಿದೆ. ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಪೂರಕವಾಗಿ ವೈಯಕ್ತಿಕ ಸಹಕಾರ ನೀಡಲು ನಾನು ಬದ್ಧನಾಗಿದ್ದೇನೆ ಎಂದರು.

 ಫೌಂಡೇಷನ್ ನ ಕೇಂದ್ರೀಯ ಸಮಿತಿ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ಪೂರ್ವಾಹ್ನ ನಡೆದ ಚಾಲನಾ ಅವಧಿಯಲ್ಲಿ ಸಂಸ್ಥೆಯ ವಾರ್ಷಿಕ ಚಟುವಟಿಕೆಗಳ ಸಂಗ್ರಹದ ಸಂಚಿಕೆಯನ್ನು ಸಂಸ್ಥೆಯ ಚೇರ್ಮನ್  ಹಾಜಿ ಮನ್ಸೂರ್ ಅಹಮದ್ ಆಝಾದ್ ಬಿಡುಗಡೆಗೊಳಿಸಿದರು. ಸದಸ್ಯ ಅಬ್ದುಲ್ ರಝಾಕ್ ಅನಂತಾಡಿ ವರದಿ ವಾಚಿಸಿದರು 

ಜಿ.ಪಂ. ಮಾಜಿ ಸದಸ್ಯ ಪದ್ಮಶೇಖರ ಜೈನ್, ಫೌಂಡೇಷನ್ ಕೋಶಾಧಿಕಾರಿ ಬಿ.ಎಂ.ಶರೀಫ್ ಬೋಳಾರ್, ಆಡಳಿತಾಧಿಕಾರಿ ಆಬಿದ್ ಅಸ್ಗರ್, ಸ್ಥಾಪಕ ಅಧ್ಯಕ್ಷ ಖಾಸಿಂ ಆಹ್ಮದ್, ಅಬ್ದುಲ್ಲಾ ಮೋನು ಖತಾರ್, ಅಬ್ಬಾಸ್ ಉಚ್ಚಿಲ್ , ತನ್ವೀರ್ ಅಹಮದ್, ಅಬ್ದುಲ್ ಹಮೀದ್ ಅಸ್ಕಾಫ್, ಅಹಮದ್ ಬಾವಾ,  ಮೊಹಮ್ಮದ್ ಅಲಿ, ಇಲ್ಯಾಸ್ ಅಹಮದ್, ಅಕ್ತಾರ್ ಹುಸೇನ್  ಮೊದಲಾದವರು ಭಾಗವಹಿಸಿದ್ದರು. 

ಇದೇ ವೇಳೆ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಮಾಜಿ ಸಚಿವ ಬಿ. ರಮಾನಾಥ ರೈ ಹಾಗೂ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಸನ್ಮಾನಿಸಲಾಯಿತು.

   ಮೊಹಮ್ಮದ್ ಹನೀಫ್ ಹಾಜಿ ಸ್ವಾಗತಿಸಿ, ಹಕೀಂ ಕಲಾಯಿ ವಂದಿಸಿದರು. ಆಶಿಕ್ ಕುಕ್ಕಾಜೆ ಖಿರಾತ್ ಪಠಿಸಿದರು, ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.