ಡೈಲಿ ವಾರ್ತೆ : 28 ಜೂನ್ 2022

ಉಡುಪಿ: ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಉದ್ಧವ್ ಠಾಕ್ರೆ ಬಣ ಹಾಗೂ ಏಕನಾಥ ಶಿಂಧೆ ನೇತೃತ್ವದ ಬಂಡಾಯ ಶಾಸಕರು ಘಟಾನುಘಟಿ ವಕೀಲರನ್ನು ನೇಮಕ ಮಾಡಿಕೊಂಡು ಸರ್ವೋಚ್ಛ ನ್ಯಾಯಾಲಯದಲ್ಲಿ ತಮ್ಮ ವಾದವನ್ನು ಮಂಡಿಸುತ್ತಿದ್ದಾರೆ. ಈ ತಂಡದಲ್ಲಿ ಕನ್ನಡಿಗ ದೇವದತ್ ಕಾಮತ್ ಕೂಡ ಇರುವುದು ವಿಶೇಷ.

ದೇವದತ್ ಕಾಮತ್ ಈ ಹಿಂದೆ ಹಿಜಾಬ್ ವಿದ್ಯಾರ್ಥಿನಿಯರ ಪರವಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ದೇವದತ್ ಕಾಮತ್ ಇದೀಗ ಶಿವಸೇನೆಯ ವಕೀಲರಾಗಿದ್ದಾರೆ. ಸದ್ಯ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ನ್ಯಾಯಾಲಯದಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎನ್ನುವುದರ ಬಗ್ಗೆ ಶಿವಸೇನೆಗೆ ಸಲಹೆ ನೀಡುತ್ತಿದ್ದಾರೆ. ಶಿವಸೇನೆಯ ಕಾನೂನು ಸಲಹೆಗಾರರಾಗಿ ಅವರು ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನು ಸದ್ಯ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ನಾನಾ ರೀತಿಯ ವಿಶ್ಲೇಷಣೆ ಕೇಳಿ ಬರುತ್ತಿದೆ. ಶಿವಸೇನೆಯ ಮೂರನೇ ಎರಡರಷ್ಟು ಶಾಸಕರು ಬಂಡಾಯ ನಾಯಕ ಏಕನಾಥ ಶಿಂಧೆ ಅವರ ಜೆತೆಗಿದ್ದಾರೆ. ಆದ್ದರಿಂದ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಸ್ಥಾನದಿಂದ ಅನರ್ಹ ಮಾಡಲು ಆಗುವುದಿಲ್ಲ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಶಿಂಧೆ ಬಣದ ಶಾಸಕರೂ ಕೂಡ ಇದನ್ನೇ ಹೇಳುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೇವದತ್ ಅವರು, ಮೂರನೇ ಎರಡರಷ್ಟು ಶಾಸಕರು ಬೇರೆ ಪಕ್ಷ ಸೇರಿದರೇ ಮಾತ್ರ ಈ ಕಾಯ್ದೆ ಅನ್ವಯವಾಗುವುದಿಲ್ಲ. ಆದರೆ ಈ ಶಾಸಕರು ಬಂಡಾಯ ಸಾರಿದ್ದು, ಬೇರೆ ಪಕ್ಷ ಸೇರಿಲ್ಲ. ಹೀಗಾಗಿ ಉಪ ಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್ ಸರಿಯಾಗಿಯೇ ಇದೆ ಎಂದು ಕಾಮತ್ ಹೇಳಿದ್ದಾರೆ.

ಸದ್ಯ ಶಿಸವೇನೆಗೆ ಕಾನೂನು ಸಲಹೆಗಾರರಾಗಿರುವ ದೇವದತ್ ಅವರು, ಈ ಹಿಂದೆ ಕೂಡ ಇಂಥಹದ್ದೇ ಪ್ರಕರಣಗಳಲ್ಲಿ ವಾದ ಮಂಡನೆ ಮಾಡಿದ್ದರು. 2018ರ ಕರ್ನಾಟಕ ವಿಧನಾಸಭೆ ಚುನಾವಣೆ ನಡೆದು ರಾಜಕೀಯ ಹೈಡ್ರಾಮವೇ ನಡೆದಿತ್ತು. ಬಹುಮತ ಇಲ್ಲದೇ ಇಲ್ಲದಿದ್ದರೂ ಕೂಡ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಧ್ಯರಾತ್ರಿ ಕಾರ್ಯನಿರ್ವಹಿಸಿತ್ತು. ಈ ವೇಳೆ ಕಾಂಗ್ರೆಸ್ ಪರ ದೇವದತ್ ಹಾಜರಾಗಿದ್ದರು.