ಡೈಲಿ ವಾರ್ತೆ : 29 ಜೂನ್ 2022

✍🏻 ಕುಮಾರ್ ನಾಯ್ಕ್ ಭಟ್ಕಳ

ಭಟ್ಕಳ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪುರಸಭೆ ಆಡಳಿತ ತೆಗೆದುಕೊಂಡ ನಿರ್ಧಾರದಿಂದ ಇದೀಗ ಭಾಷಾ ವಿವಾದ ಕಾರವಾರದಿಂದ ಭಟ್ಕಳದ ಗಡಿಯವರೆಗೂ ತಲುಪಿದೆ. ಈ ವಿಚಾರವಾಗಿ ಅಂಬಿಗ ನ್ಯೂಸ್ ಭಟ್ಕಳ ಶಾಸಕ ಸುನೀಲ್ ನಾಯ್ಕ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಮಾತನಾಡಿ ಭಟ್ಕಳ ಪುರಸಭೆಯಲ್ಲಿ ಉರ್ದು ಭಾಷೆಯಲ್ಲಿ ನಾಮಫಲಕ ಅಳವಡಿಸಿದ್ದು ಕಾನೂನು ಬಾಹಿರವಾಗಿದ್ದು , ಇದಕ್ಕೆ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಕನ್ನಡಪರ ಸಂಘಟನೆಗಳ ಹೋರಾಟದ ಮೂಲಕ ಈ ವಿಚಾರ ತಮ್ಮ ಗಮನಕ್ಕೆ ಬಂದಿದ್ದು , ನಾನು ಉರ್ದು ಭಾಷೆಯ ನಾಮಫಲಕ ತೆರವುಗೊಳಿಸಿವಂತೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದು , ಜಿಲ್ಲಾಡಳಿತ ಎರಡು ದಿನಗಳ ಕಾಲಾವಕಾಶ ಕೇಳಿದೆ, ಒಂದೊಮ್ಮೆ ಎರಡು ದಿನಗಳಲ್ಲಿ ಭಟ್ಕಳ ಪುರಸಭೆ ಅಳವಡಿಸಿರುವ ಉರ್ದು ಭಾಷೆ ನಾಮಫಲಕವನ್ನು ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತ ತೆರವುಗೊಳಿಸದ್ದಿದ್ದಲ್ಲಿ ಖುದ್ದಾಗಿ ತಾನು ತನ್ನ ಕಾರ್ಯಕರ್ತರ ಪಡೆಯೊಂದಿಗೆ ಭಟ್ಕಳ ಪುರಸಭೆಗೆ ತೆರಳಿ ಪುರಸಭೆಗೆ ಮುತ್ತಿಗೆ ಹಾಕಿ ಉರ್ದು ಭಾಷೆಯ ನಾಮಫಲಕವನ್ನು ತೆರವುಗೊಳಿಸುತ್ತೇನೆ ಎಂದು ತಿಳಿಸಿದ್ದಾರೆ.

ಪುರಸಭಾ ಕಾರ್ಯಾಲಯದ ಕಟ್ಟಡದಲ್ಲಿ ಉರ್ದು ನಾಮಫಲಕ ಅಳವಡಿಸುವುದನ್ನು ವಿರೋಧಿಸಿ ಉರ್ದು ನಾಮಫಲಕ ತೆರವುಗೊಳಿಸುವಂತೆ ಸೋಮವಾರ ಮತ್ತು ಮಂಗಳವಾರ ಕನ್ನಡ ಹಾಗೂ ಹಿಂದೂ ಸಂಘಟನೆಗಳು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ , ಮಂಗಳವಾರ ಸಹಾಯಕ ಆಯುಕ್ತರಿಗೆ ಮನವಿ ಕೂಡ ನೀಡಿದರು.