ಡೈಲಿ ವಾರ್ತೆ : 30 ಜೂನ್ 2022

ಕುಂದಾಪುರ : ಗದ್ದೆಯಲ್ಲಿ ಕೃಷಿ ಕೆಲಸ ಮಾಡುತ್ತಿರುವಾಗಲೇ ವ್ಯಕ್ತಿಯೊಬ್ಬರು ಕುಸಿದುಬಿದ್ದು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ದೀಟಿ ಎಂಬಲ್ಲಿ ಬುಧವಾರ ನಡೆದಿರುವುದು ವರದಿಯಾಗಿದೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹಳೆ ಹರಲಿಪುರ ಗ್ರಾಮದ ನಿವಾಸಿ, ಪ್ರಸಕ್ತ ಕುಂದಾಪುರ ವಂಡ್ಸೆಯಲ್ಲಿ ವಾಸವಿದ್ದ ಕಾಂತುರಾಜು (40) ಮೃತಪಟ್ಟವರು. ಹೃದಯ ಸಂಬಂಧಿ ಸಮಸ್ಯೆಯಿಂದ ಅವರು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.

ಘಟನೆ ವಿವರ: ಕೆರಾಡಿ ಗ್ರಾಮದ ದೀಟಿ ಎಂಬಲ್ಲಿ ಸ್ಥಳೀಯ ನಿವಾಸಿಯೊಬ್ಬರು ಕೃಷಿ ಮಾಡಲು ಗದ್ದೆಯನ್ನು ಗೇಣಿಗೆ ಪಡೆದುಕೊಂಡು ಗದ್ದೆ ಉಳುಮೆ ಮಾಡಲು ಬೆಳ್ಳಾಲದವರೊಬ್ಬರಿಂದ ಟ್ರಾಕ್ಟರ್‌ನ್ನು ಪಡೆದಿದ್ದರು. ಬುಧವಾರ ಅದರ ಚಾಲಕ ಕಾಂತುರಾಜು ಟ್ರಾಕ್ಟರ್ ನಿಂದ ಗದ್ದೆ ಉಳುಮೆ ಮಾಡುತ್ತಿದ್ದರು. ಈ ವೇಳೆ ನಾಲೈದು ಮಂದಿ ಅವರ ಜೊತೆಗೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಊಟದ ಸಮಯದಲ್ಲಿ ಕೆಲಸ ನಿಲ್ಲಿಸಿದ್ದು, ಕಾಂತರಾಜು ಟ್ರಾಕ್ಟರ್‌ನ್ನು ನಿಲ್ಲಿಸಿ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿದಾಗ ಏಕಾಏಕಿ ಕುಸಿದು ಬಿದ್ದರೆನ್ನಲಾಗಿದೆ. ಸ್ಥಳದಲ್ಲಿದ್ದವರು ಕೂಡಲೇ ಅವರನ್ನು ಖಾಸಗಿ ಆ್ಯಂಬುಲೆನ್ಸ್ ನಲ್ಲಿ ಚಿಕಿತ್ಸೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.