ಡೈಲಿ ವಾರ್ತೆ: 27/April/2024

KSRTC ಬಸ್‌ ಬದಲಿಗೆ ಕಾರಿನಲ್ಲಿ ಮತಪೆಟ್ಟಿಗೆ ರವಾನೆ: ವಾಹನ ತಡೆದು ಗ್ರಾಮಸ್ಥರ ಪ್ರತಿಭಟನೆ

ರಾಮನಗರ: ಮತದಾನ ಮುಕ್ತಾಯವಾದ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ ಬದಲಾಗಿ ಕಾರಿನಲ್ಲಿ ಮತಪೆಟ್ಟಿಗೆ ರವಾನೆ ಮಾಡುತ್ತಿದ್ದ ಚುನಾವಣಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಕಾರನ್ನು ತಡೆದು ಅಧಿಕಾರಿಗಳ ವಿರುದ್ಧ ವಾಗ್ವಾದ ನಡೆಸಿದ ಘಟನೆ ಚನ್ನಪಟ್ಟಣ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬೂತ್ ನಂ.46 ರ ಮತಪೆಟ್ಟಿಗೆಯನ್ನ ಕಾರಿನಲ್ಲಿ ರವಾನೆ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬೂತ್ ನಂ-47ರ ಮತಗಟ್ಟೆಯನ್ನ ಬಸ್‌ನಲ್ಲಿ ರವಾನೆ ಮಾಡಲು ಅಧಿಕಾರಿಗಳು ಮುಂದಾಗಿದ್ದರು. ಎರಡೂ ಮತಪೆಟ್ಟಿಗೆಗಳನ್ನ ಬಸ್‌ನಲ್ಲೇ ರವಾನೆ ಮಾಡುವಂತೆ ಜನರು ಆಗ್ರಹಿಸಿದರು. ಸ್ಥಳಕ್ಕೆ ಚುನಾವಣಾಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದ ಘಟನೆ ನಡೆಯಿತು.

ಮತಪೆಟ್ಟಿಗೆ ಕೊಂಡೊಯ್ಯುತ್ತಿದ್ದ ವಾಹನ ನಡೆದು ಗ್ರಾಮಸ್ಥರ ಪ್ರತಿಭಟನೆ ನಡೆಸಿದ ಹಿನ್ನೆಲೆ, ಲಾಠಿ ಬೀಸಿ ಗ್ರಾಮಸ್ಥರನ್ನ ಪೊಲೀಸರು ಚದುರಿಸಿದರು. ಮತಪೆಟ್ಟಿಗೆ ರವಾನೆ ಮಾಡಲು ಗ್ರಾಮಸ್ಥರು ಬಿಡಲಿಲ್ಲ. ಆಗ ಪೊಲೀಸರು ಗ್ರಾಮಸ್ಥರ ಮೇಲೆ ಲಾಠಿ ಪ್ರಹಾರ ನಡೆಸಿದರು.

ಸ್ಥಳಕ್ಕೆ ಚನ್ನಪಟ್ಟಣ ತಹಸಿಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪೊಲೀಸ್ ಭದ್ರತೆಯಲ್ಲಿ ಮತಪೆಟ್ಟಿಗೆಗಳ ರವಾನೆ ಮಾಡಲಾಯಿತು. ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಕೆಎಸ್‌ಆರ್‌ಟಿಸಿ ಬಸ್ ಮೂಲಕ ಮತಪೆಟ್ಟಿಗೆಗಳ ರವಾನಿಸಿದರು.