ಡೈಲಿ ವಾರ್ತೆ: 06 ಅಕ್ಟೋಬರ್ 2022

ಆಸ್ಪತ್ರೆಯ ಒಳಚರಂಡಿ ದುರಂತ : ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದ 4 ಯುವಕರು ವಿಷಾನಿಲದಿಂದ ಉಸಿರುಗಟ್ಟಿ ಮೃತ್ಯು..!

ನವದೆಹಲಿ: ಸುರಕ್ಷತಾ ಸಾಧನಗಳಿಲ್ಲದೆ ಒಳಚರಂಡಿ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ಇಳಿದ 4 ಯುವಕರು ದುರಂತವಾಗಿ ಸಾವಿಗೀಡಾದ ಘಟನೆ ಫರಿದಾಬಾದ್ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.

ಮೃತರನ್ನು ದಕ್ಷಿಣಪುರಿ ದೆಹಲಿ, ಸಂಗಮ್ ವಿಹಾರ್, ಸಂಜಯ್ ಕ್ಯಾಂಪ್ ನಿವಾಸಿಗಳಾದ ರೋಹಿತ್, ರವಿ, ವಿಶಾಲ್ ಮತ್ತು ರವಿ ಎಂದು ಗುರುತಿಸಲಾಗಿದೆ. ಮೃತರ ವಯಸ್ಸು ಸುಮಾರು 25 ರಿಂದ 30 ವರ್ಷಗಳು ಎಂದು ಹೇಳಲಾಗುತ್ತದೆ. ಆಸ್ಪತ್ರೆಯ ಒಳಚರಂಡಿ ಶುಚಿಗೊಳಿಸಲು ಇಳಿದ ನಾಲ್ವರು ಯುವಕರು ಅಲ್ಲಿನ ವಿಷಾನಿಲದಿಂದ ಉಸಿರುಗಟ್ಟಿ ಅಲ್ಲೇ ಸಾವಿಗೀಡಾಗಿದ್ದಾರೆ.

ಸ್ಥಳೀಯ ಪೊಲೀಸರ ಸಹಾಯದಿಂದ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ, ಸಾಕಷ್ಟು ಪ್ರಯತ್ನದ ನಂತರ ಟ್ಯಾಂಕ್ ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ನಾಲ್ವರು ಯುವಕರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರು ಆದರೆ ವೈದ್ಯರು ನಾಲ್ವರೂ ಸತ್ತಿದ್ದಾರೆ ಎಂದು ಘೋಷಿಸಿದರು.

ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಶ್ಚರ್ಯಕರವಾಗಿ, ಶುಚಿಗೊಳಿಸುವ ಗುತ್ತಿಗೆಯನ್ನು ತೆಗೆದುಕೊಂಡ ಖಾಸಗಿ ಏಜೆನ್ಸಿ ಮತ್ತು ಆಸ್ಪತ್ರೆ ಆಡಳಿತ ಮಂಡಳಿ ಪರಸ್ಪರ ನಿರ್ಲಕ್ಷ್ಯದ ಆರೋಪ ಹೊರಿಸುತ್ತಿದ್ದಾರೆ.