ಡೈಲಿ ವಾರ್ತೆ: 24 ಅಕ್ಟೋಬರ್ 2022

ಬ್ರಹ್ಮಾವರ ಮನೆಯೊಂದಕ್ಕೆ ನುಗ್ಗಿದ ಕಳ್ಳರು : 1.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಬ್ರಹ್ಮಾವರ : ತಾಲೂಕಿನ ಹೇರಾಡಿ ರಂಗನಕೆರೆಯಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು 1.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

ಆರ್.ಎಸ್ ಉದಯ್ ಕುಮಾರ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಇವರು ಬೆಂಗಳೂರಿನಲ್ಲಿ ಇದ್ದ ಸಮಯದಲ್ಲಿ ಅವರ ಹೆಂಡತಿ ಮತ್ತು ಮಗ ಅವರ ಅಕ್ಕನ ಮನೆಗೆ ಹೋಗಿದ್ದರು. ಅಲ್ಲದೆ ಉದಯ್ ಅವರ ತಮ್ಮ ಕೂಡಾ ಮನೆಗೆ ಬೀಗ ಹಾಕಿ ಅವರ ಸೈಕಲ್ ಶಾಪಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅ.22 ರ ರಾತ್ರಿ ಕಳ್ಳರು ಮನೆಗೆ ನುಗ್ಗಿ 1,50,000 ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.



ಅ.23 ರಂದು ಬೆಳಿಗ್ಗೆ ಉದಯ್ ಕುಮಾರ್ ಅವರು ಮನೆಗೆ ಬಂದ ವೇಳೆ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.