ಡೈಲಿ ವಾರ್ತೆ: 31 ಅಕ್ಟೋಬರ್ 2022

ವಿದ್ಯುತ್ ತಂತಿ ಮೇಲೆ ಓಡಾಡಿ ಬಾವಲಿಯ ಹುಚ್ಚಾಟ ಮೆರೆದ ವಿಚಿತ್ರ ಮನುಷ್ಯ ! ಹಲವು ಗಂಟೆಗಳ ಕಾರ್ಯಾಚರಣೆ-ಜೀವಂತ ಸೆರೆ ಹಿಡಿದು ನಿಟ್ಟುಸಿರು ಬಿಟ್ಟ ಇಲಾಖೆ. ವಿಡಿಯೋ ವೈರಲ್

ಕಾಸರಗೋಡು:ವಿಚಿತ್ರ ಮನುಷ್ಯ ಬಾವಲಿಯ ಹುಚ್ಚಾಟಕ್ಕೆ ಲೈನ್ ಮ್ಯಾನ್ ಗಳ ಸಹಿತ ಪೊಲೀಸರು ಹಾಗೂ ಸ್ಥಳೀಯರು ಸುಸ್ತಾಗಿದ್ದು, ಕೆಲ ಗಂಟೆಗಳ ಕಾರ್ಯಾಚರಣೆಯ ಬಳಿಕ ಜೀವಂತ ಸೆರೆ ಹಿಡಿದು ಬದುಕಿಸಿದ ಘಟನೆಯೊಂದು ಕಾಸರಗೋಡು ಜಿಲ್ಲೆಯ ಮಾವುಂಗಲ್ ಎಂಬಲ್ಲಿಂದ ವರದಿಯಾಗಿದೆ.

ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡಿದ್ದ ಮಾನಸಿಕ ಅಸ್ವಸ್ಥನೊಬ್ಬ ಮಧ್ಯಾಹ್ನದ ವೇಳೆ ನೋಡನೋಡುತ್ತಿದ್ದಂತೆ ವಿದ್ಯುತ್ ಕಂಬ ಏರಿದ್ದಾನೆ. ಆತನ ಪುಣ್ಯಕ್ಕೆ ಆ ವೇಳೆಗಾಗಲೇ ವಿದ್ಯುತ್ ಚಾಲನೆ ಇಲ್ಲದೇ ಇದ್ದುದರಿಂದ ಅವಘಡ ತಪ್ಪಿದ್ದು, ಕೂಡಲೇ ಸ್ಥಳೀಯರು ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಿ ವಿದ್ಯುತ್ ಚಾಲನೆಯನ್ನು ನಿಲ್ಲಿಸಲು ಸೂಚನೆ ನೀಡಿದ್ದರು.

ಘಟನೆಯ ಬಗ್ಗೆ ಸುದ್ದಿಯಾದ ಬೆನ್ನಲ್ಲೇ ಪೊಲೀಸರು ಹಾಗೂ ಮೆಸ್ಕಾಂ ಇಲಾಖೆ ಸ್ಥಳಕ್ಕೆ ಧಾವಿಸಿದ್ದು, ಜನ ಸೇರುವುದನ್ನು ಕಂಡ ಮಾನಸಿಕ ಅಸ್ವಸ್ಥ ಬಾವಲಿಯಂತೆ ವಿದ್ಯುತ್ ತಂತಿಗಳನ್ನು ಹಿಡಿದು ಅತ್ತಿಂದಿತ್ತ ಸಂಚರಿಸಲು ಶುರುಮಾಡಿದ್ದಾನೆ. ಅದೆಷ್ಟೇ ಮನವರಿಕೆ ಮಾಡಿದರೂ, ಅಪಾಯದ ಮುನ್ಸೂಚನೆ ನೀಡಿದರೂ ಕೇರ್ ಎನ್ನದ ಆತ ಹುಚ್ಚಾಟ ಮುಂದುವರಿಸಿದ್ದ.

ರಕ್ಷಣೆಯ ವಿಡಿಯೋ ಇಲ್ಲಿದೆ

ಬಳಿಕ ಹರಸಾಹಸ ಪಟ್ಟು ವಿದ್ಯುತ್ ಕಂಬಕ್ಕೆ ಏಣಿ ಇಟ್ಟು ಹತ್ತಿದ ಸಿಬ್ಬಂದಿಗಳು ಆತನ ಕಾಲಿಗೆ ಹಗ್ಗ ಕಟ್ಟಿ ಎಳೆದು ತಂದಿದ್ದಾರೆ. ಬಳಿಕ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಕೆಲವು ಗಂಟೆಗಳ ಆತನ ಹುಚ್ಚಾಟವು ಭಯದ ವಾತಾವರಣ ಸೃಷ್ಟಿಸಿದ್ದು, ಪೊಲೀಸರ ಸಹಿತ ಮೆಸ್ಕಾಂ ಇಲಾಖೆಗೆ ತಲೆನೋವಾಗಿ ಕಾಡಿದ ಆತನ ಹುಚ್ಚಾಟದ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಲ್ಲಿದೆ ಮನುಷ್ಯ ಬಾವಲಿಯ ಹುಚ್ಚಾಟದ ತುಣುಕು.