ಡೈಲಿ ವಾರ್ತೆ: 31 ಅಕ್ಟೋಬರ್ 2022

ಪತಿಯ ಕಿರುಕುಳಕ್ಕೆ ಮನನೊಂದ ಪತ್ನಿ : ಇಬ್ಬರು ಮಕ್ಕಳೊಂದಿಗೆ ಡ್ಯಾಮ್ ಗೆ ಹಾರಿ ಆತ್ಮಹತ್ಯೆಗೆ ಶರಣು

ಚಿತ್ರದುರ್ಗ: ಕುಡಿತಕ್ಕೆ ದಾಸನಾಗಿ ಕಿರುಕುಳ ನೀಡುತ್ತಿದ್ದ ಪತಿಯ ಕಾಟವನ್ನು ತಾಳಲಾರದೆ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಚೆಕ್ ಡ್ಯಾಮ್ ಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಹೊಸದುರ್ಗ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ.

ಜಾನಕಲ್ ಲಂಬಾಣಿ ಹಟ್ಟಿಯ ಅರ್ಪಿತಾ(28) ಅವರು ತನ್ನ ಮಗಳಾದ ಮಾನಸ(6) ಮತ್ತು ಮಗ ಮದನ್(4)ನನ್ನು ಚೆಕ್ ಡ್ಯಾಮ್ ಗೆ ಎಸೆದು ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ 8 ವರ್ಷಗಳ ಹಿಂದೆ ಹೊಸದುರ್ಗ ತಾಲೂಕಿನ ಜಾನಕಲ್ ಲಂಬಾಣಿ ಹಟ್ಟಿಯ ಅರ್ಪಿತಾಳನ್ನು ಕೊಂಡಜ್ಜಿ ಲಂಬಾಣಿ ಹಟ್ಟಿಯ ಮಂಜಾನಾಯ್ಕ್ ಮದುವೆಯಾಗಿದ್ದು, ಪತ್ನಿ ಮೇಲೆ ಅನುಮಾನ ಪಡುತ್ತಿದ್ದನು ಎನ್ನಲಾಗಿದೆ.

ಅಲ್ಲದೇ ನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ಕಿರುಕುಳ ನೀಡುತ್ತಾ ಹಲ್ಲೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.

ಆತನ ಕಿರುಕುಳದಿಂದ ಮನನೊಂದ ಅರ್ಪಿತಾ ತನ್ನ ಇಬ್ಬರು ಮಕ್ಕಳೊಂದಿಗೆ ಚೆಕ್ ಡ್ಯಾಮ್ ಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಅರ್ಪಿತಾ, ಮೊಬೈಲ್ ವೀಡಿಯೋ ಆನ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೆಲ್ಫಿ ವೀಡಿಯೋ ವೇಳೆ ಅಪ್ಪ ಎಂದು ಕೂಗಿರುವ ಪುಟ್ಟ ಬಾಲಕ ಮದನ್ ನ ಮನಕಲಕುವ ದೃಶ್ಯ ಸೆರೆಯಾಗಿದೆ.
ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.