ಡೈಲಿ ವಾರ್ತೆ: 01 ಡಿಸೆಂಬರ್ 2022

ಉಡುಪಿ ಜಿಲ್ಲೆಯಲ್ಲಿ ಒಂದು ಲಕ್ಷ ಮತದಾರರ ಹೆಸರಿಗೆ ಕತ್ತರಿ: ಅಶೋಕ್ ಕುಮಾರ್ ಕೊಡವೂರು ಆರೋಪ

ಉಡುಪಿ: ಮುಂಬರುವ ವಿಧಾನಸಭಾ ಚುನಾವಣೆಗೆ ಪೂರ್ವ ತಯಾರಿಯಾಗಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಎಲ್ಲಾ ಮುಖಂಡರು, ಕಾರ್ಯಕರ್ತರು ತೊಡಗಿಸಿಕೊಳ್ಳಬೇಕಾಗಿದೆ. ಉಡುಪಿ ಜಿಲ್ಲೆಯ ಒಟ್ಟು 12 ಲಕ್ಷ ಮತಗಳಲ್ಲಿ ಸುಮಾರು ಒಂದು ಲಕ್ಷ ಮತದಾರರನ್ನು ಕೈಬಿಡಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಆರೋಪ ಮಾಡಿದ್ದಾರೆ.

ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸಿರುವ ಆಕಾಂಕ್ಷಿಗಳ, ಬ್ಲಾಕ್ ಅಧ್ಯಕ್ಷರ, ಮುಂಚೂಣಿ ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಅಲ್ಲದೇ ಮತದಾರರ ಪರಿಷ್ಕರಣೆ ಸಮಯ ಒಂದೇ ಕುಟುಂಬದ ಮತದಾರ ರನ್ನು ವಿಂಗಡಿಸಿ ಅವರ ಮತದಾನದ ಕೇಂದ್ರವನ್ನು ಬದಲು ಮಾಡುವ ಪ್ರಕ್ರಿಯೆ ಯೂ ನಡೆಯುತ್ತಿದೆ. ಬಿಜೆಪಿಯ ಈ ಷಡ್ಯಂತ್ರವನ್ನು ನಾವು ಜನತೆಗೆ ಮನವರಿಕೆ ಮಾಡಿಕೊಡಬೇಕಾಗಿದೆ. ವಾಮ ಮಾರ್ಗದಲ್ಲಿ ಚುನಾವಣೆ ಗೆಲ್ಲುವ ಪಿತೂರಿ ಬಿಜೆಪಿಯಿಂದ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಮಾಜಿ ಸಚಿವರೂ, ಪಕ್ಷದ ಜಿಲ್ಲಾ ಉಸ್ತುವಾರಿಗಳೂ ಆದ ಅಭಯಚಂದ್ರ ಜೈನ್ ಮಾತನಾಡಿ, ಚುನಾವಣೆ ಹತ್ತಿರ ಬರುವಾಗ ಕರಾವಳಿಯಲ್ಲಿ ಕೋಮು ದ್ವೇಷದ ವಾತಾವರಣ ಸೃಷ್ಟಿಸಲಾಗುತ್ತಿದೆ. ಜನತೆ ಎಚ್ಚರದಿಂದ ಇರಬೇಕು. ಕೇವಲ ಭಾವನೆ ಕೆದಕುವುದರಿಂದ, ಕೋಮು ಗಲಭೆಗಳಿಂದ ಜನರ ಅಭಿವೃದ್ಧಿಯಾಗಲ್ಲ. ಬಿಜೆಪಿ ಮೂರು ಬಾರಿ ಆಡಳಿತ ನಡೆಸಿದರೂ ಜನರ ಬದುಕು ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಜನರು ಜಿಎಸ್‌ಟಿ, ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ ಬೆಲೆ ಏರಿಕೆಗಳಿಂದ ತತ್ತರಿಸಿ ಹೋಗಿದ್ದಾರೆ. ಜನರ ಬದುಕು ಹಸನಾಗಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾಗಿದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್ ಹಾಗೂ ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೇಲಿಯೋ ಮತದಾರ ಪಟ್ಟಿಯ ಪರಿಷ್ಕರಣೆ ಸಮಯ ಸರಕಾರ ದಿಂದ ನಡೆದ ಷಡ್ಯಂತ್ರವನ್ನು ವಿವರಿಸಿ ಜಿಲ್ಲಾದ್ಯಂತ ಮತದಾರರ ಹೆಸರು ನೋಂದಾವಣೆ ಮತ್ತು ಪರಿಷ್ಕರಣೆ ಅಭಿಯಾನವನ್ನು ಹಮ್ಮಿಕೊಳ್ಳಲು ಸಲಹೆ ನೀಡಿದರು.

ಸಭೆಯಲ್ಲಿ ಮುಖಂಡರಾದ ಬಿ.ನರಸಿಂಹ ಮೂರ್ತಿ, ನೀರೆ ಕೃಷ್ಣ ಶೆಟ್ಟಿ, ಶ್ಯಾಮಲಾ ಭಂಡಾರಿ, ಬ್ಲಾಕ್ ಅಧ್ಯಕ್ಷರಾದ ಮಂಜುನಾಥ ಪೂಜಾರಿ, ನವೀನ್ವಂದ್ರ ಸುವರ್ಣ, ಶಂಕರ ಕುಂದರ್, ಹರಿಪ್ರಸಾದ್ ಶೆಟ್ಟಿ, ಸದಾಶಿವ ದೇವಾಡಿಗ, ಸಂತೋಷ್ ಕುಲಾಲ್, ಮದನ್ ಕುಮಾರ್, ಪ್ರದೀಪ್ ಕುಮಾರ್, ರಮೇಶ್ ಕಾಂಚನ್ ಹಾಗೂ ಮುಖಂಡರಾದ ಪ್ರಖ್ಯಾತ ಶೆಟ್ಟಿ, ಕಿಶನ್ ಹೆಗ್ಡೆ ಕೊಳೆ ಬೈಲ್, ಅಬೀಬ್‌ಆಲಿ, ಮೀನಾಕ್ಷಿ ಮಾಧವ ಬನ್ನಂಜೆ, ರೋಶನಿ ಒಲಿವರಾ, ಯತೀಶ ಕರ್ಕೇರ, ಅಮೃತ್ ಶೆಣೈ, ಶಶಿಧರ ಎಲ್ಲೂರು, ಜಯಕುಮಾರ್,ರೋಶನ್ ಶೆಟ್ಟಿ, ಕಿಶೋರ್ ಕುಮಾರ್ ಎರ್ಮಾಳ್, ಸುರೇಶ್ ಶೆಟ್ಟಿ ಬನ್ನಂಜೆ, ಗಣೇಶ್ ನೆರ್ಗಿ, ಸಾಯಿರಾಜ್ ಕಿದಿಯೂರು, ಸಂಜಯ ಆಚಾರ್ಯ ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕುಶಲ್ ಶೆಟ್ಟಿ ಸ್ವಾಗತಿಸಿ, ಅಣ್ಣಯ್ಯ ಸೇರಿಗಾರ್ ವಂದಿಸಿದರು. ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು.