ಡೈಲಿ ವಾರ್ತೆ: 26/April/2024

ಮತದಾನ ಕೇಂದ್ರದಲ್ಲೇ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತ್ಯು!

ಮಡಿಕೇರಿ: ಮತದಾನ ಮಾಡಲು ಹೋಗಿದ್ದ ವ್ಯಕ್ತಿಯೋರ್ವರು ಮತದಾನ ಮಾಡಿ ಮತ ಕೇಂದ್ರದಿಂದ ಹೊರಬಂದ ತಕ್ಷಣವೇ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿ.ಶೇಟಿಗೇರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಖ್ಯಾತ ಚಂಡೆ ವಾದಕ ಪದಾರ್ಥಿ ಮನೋಹರ್ ಮತದಾನ ಕೇಂದ್ರಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ಮತದಾನ ಮಾಡುವ ವೇಳೆಯಲ್ಲೇ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಸುಸ್ತಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ನಂತರ ಮತದಾನ ಕೇಂದ್ರದ ಒಳಗೆ ಹೋಗಿ ಮತದಾನ ಮಾಡಿ ಬಂದ ತಕ್ಷಣವೇ ಮತದಾನ ಕೇಂದ್ರದ ಅವರಣದಲ್ಲೇ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಸಾಯುವ ಮುನ್ನ ತಮ್ಮ ಕರ್ತವ್ಯ ಮುಗಿಸಿ ಮನೋಹರ್ ಮೃತಪಟ್ಟಿದ್ದಾರೆ. ಸುತ್ತಮುತ್ತಲಿನ ಊರುಗಳಲ್ಲಿ ಮನೋಹರ್ ಅವರು ಚಂಡೆ ವಾದ್ಯದ ಮೂಲಕವೇ ಖ್ಯಾತಿಗಳಿಸಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.