ಡೈಲಿ ವಾರ್ತೆ: 02 ಡಿಸೆಂಬರ್ 2022

ಹೆಜಮಾಡಿ ಟೋಲ್ ಸುಂಕ ದಿನಾಂಕ ನಿಗದಿಯಾಗಿಲ್ಲ: ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್

ಹೆಜಮಾಡಿ ಸುಂಕ ಹೆಬ್ಬಾಗಿಲು ಜೊತೆಗೆ ಎನ್‌ಐಟಿಕೆ ಟೋಲ್ ಗೇಟ್ ವಿಲೀನವಾಗಿದೆ. ಕೇಂದ್ರ ಸರಕಾರದ ಪ್ರಕಟಣೆ ಮತ್ತು ಹೆದ್ದಾರಿ ಪ್ರಾಧಿಕಾರದ ಸುತ್ತೋಲೆಯಂತೆ ಅಲ್ಲಿ ಭದ್ರತೆ ಒದಗಿಸಲಾಗಿದೆ. ಆದರೆ ಹೆಚ್ಚುವರಿ ಸುಂಕ ವಸೂಲಿ ತಾರೀಕು ನಿಗದಿಯಾಗಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ತಿಳಿಸಿದರು.

ಜನರಿಂದ ಯಾವುದೇ ತಕರಾರು ಬಂದಿಲ್ಲ. ಜನಪ್ರತಿನಿಧಿಗಳು ಹೆಚ್ಚಿನ ಸುಂಕ ವಸೂಲಿಗೆ ತಕರಾರು ತೆಗೆದಿದ್ದಾರೆ. ಅವರ ಜೊತೆಗೆ ಮಾತನಾಡಲಾಗುವುದು. ಟೋಲ್ ವಿರೋಧಿ ಸಂಘಟನೆಯು ಪ್ರತಿಭಟನೆ ಮಾಡುವುದಾಗಿ ಹೇಳಿದೆ.

ಪ್ರಜಾಸತ್ತಾತ್ಮಕ ಪ್ರತಿಭಟನೆಗೆ ಅವಕಾಶ ಇದೆ. ಹಾನಿ ಎಸಗಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಹೆದ್ದಾರಿ ಪ್ರಾಧಿಕಾರವು ಏರಿಕೆ ಬಗೆಗೆ ದಿನಾಂಕವನ್ನು ನಮಗೆ ತಿಳಿಸಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಬಿ. ಎನ್. ಉಪಸ್ಥಿತರಿದ್ದರು.