ಡೈಲಿ ವಾರ್ತೆ:22 ಜನವರಿ 2023

ನಗರಖಾಕಿ ಕಣ್ತಪ್ಪಿಸಲು 20 ಕೆ.ಜಿ. ತೂಕ ಇಳಿಸಿದ್ದ ಕಳ್ಳ: ಗೊಂದಲಕ್ಕೀಡಾದ ಪೊಲೀಸರು

ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಮಾಂಗಲ್ಯ ಸರ ಕಸಿದು, ಪೊಲೀಸ್‌ ಠಾಣೆ ಹಿಂಭಾಗದ ಮನೆಯಲ್ಲೇ ವಾಸವಾಗಿದ್ದ ಖತರ್ನಾಕ್‌ ಕಳ್ಳ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕತ್ರಿಗುಪ್ಪೆಯ ಸಿದ್ದಾರ್ಥ ಲೇಔಟ್‌ ನಿವಾಸಿ ಮಂಜುನಾಥ ಅಲಿಯಾಸ್‌ ಜಿಮ್ ಮಂಜ (28) ಬಂಧಿತ. ಆತನಿಂದ 2.20 ಲಕ್ಷ ರೂ. ಮೌಲ್ಯದ ಸರ ವಶಪಡಿಸಿಕೊಳ್ಳಲಾಗಿದೆ.

2022ರ ಡಿ.4ರಂದು ಸಂಜೆ 6.30ರ ಸುಮಾರಿಗೆ ರುಕ್ಮಿಣಿ ಎಂಬುವರು ಪಾರ್ಕ್‌ನಲ್ಲಿ ವಾಯು ವಿಹಾರ ಮುಗಿಸಿ ಮನೆಗೆ ನಡೆದು ಹೋಗುವಾಗ ಹಿಂದಿನಿಂದ ಬಂದ ಆರೋಪಿ, ವಿಳಾಸ ಕೇಳುವ ನೆಪದಲ್ಲಿ ಮಹಿಳೆಯನ್ನು ಮಾತನಾಡಿಸಿ, ಬಳಿಕ 45 ಗ್ರಾಂ ತೂಕದ ಸರ ಕಸಿದುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

20 ಕೆ.ಜಿ ತೂಕ ಕಡಿಮೆ: ಈ ಪ್ರಕರಣದಲ್ಲಿ ಘಟನಾ ಸ್ಥಳದ ಸಿಸಿ ಕ್ಯಾಮೆರಾ ಶೋಧಿಸಲಾಗುತ್ತಿತ್ತು. ಅದರಲ್ಲಿ ದಪ್ಪವಾಗಿದ್ದ. ಹೀಗಾಗಿ ಆತನ ದೇಹ ರಚನೆ ಮತ್ತು ಮುಖಚಹರೆ ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಮತ್ತೂಂದೆಡೆ ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಜಿಮ್‌ಗೆ ತೆರಳಿ, 20 ಕೆ.ಜಿ.ತೂಕ ಕಡಿಮೆ ಮಾಡಿಕೊಂಡಿದ್ದಾನೆ. ಅಲ್ಲದೆ, ಠಾಣೆ ಹಿಂದಿನ ಮನೆಯಲ್ಲೇ ಬಾಡಿಗೆಗೆ ವಾಸವಾಗಿದ್ದ. ಈ ಮಧ್ಯೆ ಕೆಲ ದಿನಗಳ ಹಿಂದೆ ಆರೋಪಿ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ, ಕೇವಲ ಒಂದೂವರೆ ತಿಂಗಳಲ್ಲಿ ಸಣ್ಣಗಾಗಿರುವುದನ್ನು ಕಂಡು ಪೊಲೀಸರು ಒಂದು ಕ್ಷಣ ಗೊಂದಲಕ್ಕೀಡಾಗಿದ್ದರು. ಕೊನೆಗೆ ಅನುಮಾನದ ಮೇರೆಗೆ ಠಾಣೆಗೆ ಕರೆಸಿ ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಆತನಿಂದ 2.20 ಲಕ್ಷ ರೂ. ಮೌಲ್ಯದ 45 ಗ್ರಾಂ ತೂಕದ ಮಾಂಗಲ್ಯ ಸರ ವಶಪಡಿಸಿಕೊಳ್ಳಲಾಗಿದೆ.

ಕೃತ್ಯ ಎಸಗಿದ ಬಳಿಕ ಆರೋಪಿ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ತನ್ನ ಬಟ್ಟೆಯನ್ನು ಸುಟ್ಟು ಹಾಕಿದ್ದ. ವೃತ್ತಿಯಲ್ಲಿ ಜಿಮ್‌ ಟ್ರೈನರ್‌ ಆಗಿದ್ದ ಈತ ಬರುವ ಸಂಬಳ ಸಾಲದೇ ಮೊದಲ ಬಾರಿಗೆ ಸರಗಳ್ಳತನದ ಹಾದಿ ಹಿಡಿದಿದ್ದ. ಠಾಣೆಯ ಹಿಂಬದಿಯಲ್ಲೇ ಮನೆಯಾಗಿದ್ದರಿಂದ ಠಾಣೆ ಮುಂಭಾಗದ ಟೀ ಅಂಗಡಿಯಲ್ಲಿ ನಿಂತು ಪೊಲೀಸರ ಚಲನವಲನಗಳನ್ನು ಗಮನಿಸುತ್ತಿದ್ದ ಎಂದು ಪೊಲೀಸರು ಹೇಳಿದರು.