


ಡೈಲಿವಾರ್ತೆ: 23/ಜು./2026


ಶಿವಮೊಗ್ಗದಲ್ಲಿ ನೀಟ್ ಪ್ರತಿಭಟನೆ ವೇಳೆ ರಾಜಕೀಯ ಸಂಘರ್ಷ: ಬಿಜೆಪಿ ಕಚೇರಿಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು

ಶಿವಮೊಗ್ಗ: ನೀಟ್ ಅಕ್ರಮ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕಿಚ್ಚು ರಾಜ್ಯಕ್ಕೂ ಹಬ್ಬಿದೆ. ಶಿವಮೊಗ್ಗದಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವ್ಯಾನ್ ಮೇಲೇರಿ ಭಾವುಟ ಬೀಸಿದ್ದಾರೆ.
ನಗರದ ಮಹಾವೀರ ಸರ್ಕಲ್ನಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಏಕಾಏಕಿ ಪ್ರತಿಭಟನೆ ತೀವ್ರಗೊಳಿಸಿದ ಕಾಂಗ್ರೆಸ್ ಕಾರ್ಯಕರ್ತರು ಸುಮಾರು 1 ಕಿಮೀ ಓಡಿ ಹೋಗಿ, ಬ್ಯಾರಿಕೇಡ್ಗಳನ್ನು ಹಾರಿ ಏಕಾಏಕಿ ಬಿಜೆಪಿ ಕಚೇರಿಗೆ ನುಗ್ಗಿದ್ದಾರೆ. ಪ್ರತಿಭಟನೆ ವೇಳೆ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರತಿಭಟನಾಕಾರರ ಆರ್ಭಟಕ್ಕೆ ನೂಕುನುಗ್ಗಲು ಉಂಟಾಗಿದ್ದು, ಚಪ್ಪಲಿಗಳು ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಲ್ಲದೇ ಪಾರ್ಕ್ ಮಾಡಿದ್ದ ಬೈಕ್ಗಳು ಸಹ ಕೆಳಗೆ ಬಿದ್ದಿವೆ. ಕೈ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ವಾಹನದ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹತ್ತಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ರೋಶ,:
ಕಾಂಗ್ರೆಸ್ ಕಾರ್ಯಕರ್ತರು ಕಚೇರಿಗೆ ನುಗ್ಗಿದ್ದಕ್ಕೆ ಬಿಜೆಪಿ ಮುಖಂಡರು ಕಿಡಿಕಾರಿದ್ದಾರೆ. ಕಚೇರಿ ಬಳಿ ಜಮಾಯಿಸಿದ ಬಿಜೆಪಿ ಮುಖಂಡರು ಪೊಲೀಸರ ಬಳಿ ವಾಗ್ವಾದ ಮಾಡಿದ್ದಾರೆ. ಬಿಜೆಪಿ ಕಚೇರಿ ಬಾಗಿಲು ಮುಚ್ಚಲು ನೀವ್ಯಾರು? ನಮ್ಮ ರಕ್ಷಣೆ ನಾವು ಮಾಡಿಕೊಳ್ತೇವೆ. ನಿಮ್ಮ ರಕ್ಷಣೆ ಬೇಕಿಲ್ಲ. ಇಲ್ಲಿಂದ ಹೋಗಿ ಎಂದು ಪೊಲೀಸರ ಜೊತೆ ಗಲಾಟೆ ಮಾಡಿದ್ದಾರೆ.