ಡೈಲಿ ವಾರ್ತೆ:22 ಜನವರಿ 2023

ಬೆಂಗಳೂರು: ಕುಡುಕ ಗ್ರಾಹಕನ ಮೇಲೆ ಗಂಭೀರ ಹಲ್ಲೆ ನಡೆಸಿದ ಬಾರ್ ಸಿಬ್ಬಂದಿ

ಬೆಂಗಳೂರು: ಬೇರೆ ಗ್ರಾಹಕರಿಗೆ ಜಾಗ ಬಿಡಲಿಲ್ಲ ಎಂಬ ಕಾರಣಕ್ಕೆ ಜಗಳ ತೆಗೆದ ಬಾರ್ ಸಿಬ್ಬಂದಿ, ಯುವಕನೊಬ್ಬ ಬಾರ್‌ನಿಂದ ಹೊರ ಬರುತ್ತಿದ್ದಂತೆ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ನಿನ್ನೆ ಮಧ್ಯರಾತ್ರಿ ಮಂಜುನಾಥ್ ನಗರದಲ್ಲಿ ನಡೆದಿದೆ.

ಮಂಜುನಾಥ್ ನಗರದ ವೆಂಕಟಗಿರಿ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ರಾತ್ರಿ 1ರ ವೇಳೆ ಪೆರುಮಾಳ್ (25) ಎಂಬಾತನ ಮೇಲೆ ಬಾರ್ ಸಿಬ್ಬಂದಿಗಳು ಹಲ್ಲೆ ಮಾಡಿದ್ದು, ಪೊಲೀಸರು ದೂರು ತೆಗೆದುಕೊಳ್ಳಲು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಪೀಣ್ಯದಲ್ಲಿ ಕಬ್ಬಿಣದ ಕೆಲಸ ಮಾಡುತ್ತಿದ್ದ ಪೆರುಮಾಳ್, ಮದ್ಯ ತೆಗೆದುಕೊಂಡು ಕೌಂಟರ್ ಬಳಿಯೇ ಕುಡಿಯುತ್ತ ನಿಂತಿದ್ದ. ಈ ಹಿನ್ನಲೆಯಲ್ಲಿ ಬಾರ್ ಸಿಬ್ಬಂದಿಗಳು ಹಾಗು ಪೆರುಮಾಳ್ ನಡುವೆ ಜಗಳ ಉಂಟಾಗಿದೆ.

ಬಳಿಕ ಬಾರ್ ಸಿಬ್ಬಂದಿ‌ ಸುಮ್ಮನಿದ್ದು, ಪೆರುಮಾಳ್ ಮದ್ಯ ಸೇವನೆ ಬಳಿಕ ಹೊರಗೆ ಕಾಲಿಡುತ್ತಿದ್ದಂತೆ ಮುಖ ಮೂತಿ ನೋಡದೆ ಹಲ್ಲೆ ಮಾಡಿದ್ದಾರೆ. ಇನ್ನು ಸ್ಥಳಕ್ಕೆ ಪೊಲೀಸರು ಬಂದರೂ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸೋ ಸೌಜನ್ಯ ತೋರಿಸಿಲ್ಲ. ಗಾಯಳು ಸತ್ತರೇ ಸಾಯಲಿ ಬಿಡು ಎಂದು ಹೇಳಿದ್ದಾರೆ ಎಂದು ಪೊಲೀಸರ ಮೇಲೆ ಪೆರುಮಾಳ್ ಆರೋಪ ಮಾಡಿದ್ದು, ಘಟನೆ ನಡೆದ ಬಳಿಕ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.

ನಂತರ ಪೆರುಮಾಳ್‌ನನ್ನು ಆತನ ಸ್ನೇಹಿತ ಸುರೇಶ್ ಎಂಬಾತ ಆಸ್ಪತ್ರೆಗೆ ಸೇರಿಸಿದ್ದ. ಇನ್ನು ಘಟನೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೆರುಮಾಳ್‌ ಅಳಲು ತೊಡಿಕೊಂಡು ಠಾಣೆಗೆ ದೂರು ನೀಡಿದ್ದು, ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.