ಡೈಲಿ ವಾರ್ತೆ:22 ಜನವರಿ 2023

ಟಿ.ನರಸೀಪುರ : ಚಿರತೆ ದಾಳಿಗೆ ಬಾಲಕ ಬಲಿ, ಗ್ರಾಮದ ಸಮೀಪ ಶವ ಪತ್ತೆ

ಮೈಸೂರು: ಟಿ.ನರಸೀಪುರ ತಾಲ್ಲೂಕಿನಲ್ಲಿ ಇತ್ತಿಚೆಗೆ ಮನೆಯ ಮುಂದೆ ಕುಳಿತಿದ್ದ ಮೇಘನಾ ಎಂಬ ಯುವತಿಯನ್ನು ಚಿರತೆಯೊಂದು ದಾಳಿ ನಡೆಸಿ ಕೊಂದ ಘಟನೆ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ದುರ್ಘಟನೆ ಸಂಭವಿಸಿದ್ದು, 11 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ.

ಹೊರಳಹಳ್ಳಿ ಗ್ರಾಮದ ಜಯಂತ್ (11) ಮೃತ ಬಾಲಕನಾಗಿದ್ದಾನೆ.

ನಿನ್ನೆ ಮಧ್ಯರಾತ್ರಿ ಜಯಂತ್ ನ ಮೇಲೆ ದಾಳಿ ಮಾಡಿದ ಚಿರತೆ ಕೊಂದು ದೇಹವನ್ನು ಹೊತ್ತೊಯ್ದಿದೆ. ಜಯಂತ್ ಶವಕ್ಕಾಗಿ ಗ್ರಾಮಸ್ಥರು ರಾತ್ರಿಯೆಲ್ಲ ಹುಡುಕಾಟ ನಡೆಸಿದ್ದು, ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಾಲಕನ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರು ಮೃತ ಬಾಲಕನ ಶವ ಪತ್ತೆ ಹಚ್ಚುವ ಭರವಸೆ ನೀಡಿದ ಬೆನ್ನಲ್ಲೇ ಘಟನಾ ಸ್ಥಳದಿಂದ ಒಂದು ಕಿ.ಮೀ. ದೂರದಲ್ಲಿ ಮೃತ ಬಾಲಕನ ದೇಹ ಇಂದು ಬೆಳಿಗ್ಗೆ(ಜ.22) ಪತ್ತೆಯಾಗಿದೆ.

ಬಾಲಕನ ಸ್ವಲ್ಪ ದೇಹವನ್ನು ಚಿರತೆ ತಿಂದು ಹಾಕಿದ್ದು, ತಾಲೂಕಿನ ಜನತೆಯ ಆತಂಕಕ್ಕೆ ಕಾರಣವಾಗಿದೆ. ಶವ ಸಿಕ್ಕ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.