ಡೈಲಿ ವಾರ್ತೆ:23 ಜನವರಿ 2023

ನಾಯಿಯನ್ನು “ನಾಯಿ” ಎಂದು ಬೈದ ಕಾರಣಕ್ಕೆ ವ್ಯಕ್ತಿಯ ಹತ್ಯೆ !

ಚೆನ್ನೈ: ನೆರೆಮನೆಯ ಸಾಕು ನಾಯಿಯನ್ನು ‘ನಾಯಿ’ ಎಂದು ಬೈದ ಕಾರಣಕ್ಕೆ ಜಗಳ ಉಂಟಾಗಿ 65 ವರ್ಷದ ರೈತನನ್ನು ಹತ್ಯೆಗೈದ ಘಟನೆ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ತಡಿಕೊಂಬು ಪಟ್ಟಣದಲ್ಲಿ ನಡೆದಿದೆ.

ರಾಯಪ್ಪನ್ ಹತ್ಯೆಗೀಡಾದವರು. ನೆರೆಹೊರೆಯವರ ನಾಯಿಯ ವಿಷಯದಲ್ಲಿ ರಾಯಪ್ಪನ್ ಅವರಿಗೆ ಜಗಳವಾಗಿತ್ತು. ನೆರೆಹೊರೆಯವರಾದ ತನ್ನ ಸಂಬಂಧಿಕರೂ ಆದ ಡೇನಿಯಲ್ ಮತ್ತು ವಿನ್ಸೆಂಟ್ ಅವರ ನಾಯಿಗಳು ಅಲ್ಲಿ ಹೋಗುವ ಜನರ ಮೇಲೆ ಆಕ್ರಮಣಕಾರಿಯಾಗಿ ವರ್ತಿಸುತ್ತಿವೆ ಎಂದು ರಾಯಪ್ಪನ್ ಹಲವಾರು ಬಾರಿ ದೂರಿದ್ದರು.

ರಾಯಪ್ಪನ್ ಅವರು ಆ ನಾಯಿಗಳನ್ನು ಅದರ ಹೆಸರಿನಿಂದ ಕರೆಯದೆ ಕೇವಲ ನಾಯಿ ಎಂದು ಕರೆಯುತ್ತಿದ್ದರು. ಇದೇ ವಿಷಯದಲ್ಲಿ ರಾಯಪನ್ ಹಾಗೂ ನೆರೆಹೊರೆಯವರಾದ ಡೇನಿಯಲ್, ವಿನ್ಸೆಂಟ್ ನಡುವೆ ಜಗಳ ನಡದಿತ್ತು. ನಾಯಿಯ ಹೆಸರಿನಿಂದ ಕರೆಯುವಂತೆ ಅವರಿಬ್ಬರೂ ರಾಯಪ್ಪನ್’ಗೆ ತಾಕೀತು ಮಾಡಿದ್ದರು. ಆದರೆ ರಾಯಪ್ಪನ್ ಅದನ್ನು ನಿರ್ಲಕ್ಷ್ಯಿಸಿ ನಿಮ್ಮ ನಾಯಿ ಎಂದು ಕರೆಯುತ್ತಿದ್ದರು.
ಇದೇ ವಿಷಯದಲ್ಲಿ ವಾಗ್ವಾದ ಕೈ ಕೈ ಮಿಲಾಸುವ ಹಂತಕ್ಕೆ ಬಂದು ರಾಯಪ್ಪನ್ ನಾಯಿಗಳಿಗೆ ಕೋಲಿನಿಂದ ಥಳಿಸಲು ಬಂದಾಗ ಪರಿಸ್ಥಿತಿ ಕೈಮೀರಿದೆ. ವಿನ್ಸೆಂಟ್ ಮತ್ತು ಡೇನಿಯಲ್ ಸಿಟ್ಟಿನಿಂದ ರಾಯಪ್ಪನ್’ಗೆ ಥಳಿಸಿದ್ದಾರೆ. ಇದರ ನಂತರ, ರಾಯಪ್ಪನ್ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದಾರೆ.

ತಡಿಕೊಂಬು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ.