ಡೈಲಿ ವಾರ್ತೆ:23 ಜನವರಿ 2023
ಪಣಿಯೂರು: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
ಕಾಪು: ಮನೆಯ ಹಿಂಬಾಗಿಲಿನ ಬಾಗಿಲು ಮುರಿದು ಒಳ ಪ್ರವೇಶಿಸಿ ಕಳ್ಳರು ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಬೆಳ್ಳಿ ಮತ್ತು ವಜ್ರಾಭರಣಗಳನ್ನು ಕದ್ದೊಯ್ದ ಘಟನೆ ಪಣಿಯೂರಿನಲ್ಲಿ ವರದಿಯಾಗಿದೆ.
ರವಿವಾರ ಜ.22 ರಂದು ಮಧ್ಯರಾತ್ರಿಯ ಬಳಿಕ ಈ ಕಳ್ಳತನ ನಡೆದಿದ್ದು, ಸೋಮವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.
ಮೂಲ್ಕಿ ವಿಜಯಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ರಘುರಾಮ್ ರಾವ್ ಅವರ ಪಣಿಯೂರಿನ ಸ್ವಗೃಹ ಯಶ್ ಕಿರಣ್ ಇಲ್ಲಿ ಘಟನೆ ನಡೆದಿದೆ.
ಶುಭ ಕಾರ್ಯ ಮತ್ತು ಧಾರ್ಮಿಕ ಕಾರ್ಯ ಕ್ರಮಗಳ ನಿಮಿತ್ತ ಅಮೇರಿಕಾ ಬೆಂಗಳೂರು ಮತ್ತಿತರ ಕಡೆಗಳಿಂದ ಸಂಬಂಧಿಕರು ಆಗಮಿಸಿದ್ದ ಸಂದರ್ಭದಲ್ಲೇ ಈ ಕಳ್ಳತನ ಪ್ರಕರಣ ನಡೆದಿರುವುದು ಮನೆಯವರನ್ನು ಆತಂಕಗೊಳಗಾಗಿಸಿದೆ.
ಕಾಪು ಪೋಲಿಸ್ ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ಹಾಗೂ ಶಿರ್ವ ಪೋಲಿಸ್ ಠಾಣೆಯ ಎಸೈ ಮತ್ತು ಕ್ರೈಂ ಎಸೈ ಹಾಗೂ ಬೆರಳಚ್ಚು ತಜ್ಞರು, ಶ್ವಾನದಳ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.