ಡೈಲಿ ವಾರ್ತೆ: 28 ಜನವರಿ 2023

ಧನಬಾದ್ ಚಿಕಿತ್ಸಾಲಯದಲ್ಲಿ ಬೆಂಕಿ, ವೈದ್ಯ ದಂಪತಿ ಸಹಿತ ಐವರು ಸಾವು

ರಾಂಚಿ: ಬೆಂಕಿ ಅವಘಡದಲ್ಲಿ ಇಬ್ಬರು ವೈದ್ಯರ ಸಹಿತ ಕನಿಷ್ಠ ಐದು ಮಂದಿ ಸಾವನ್ನಪ್ಪಿದ ಘಟನೆ ಜಾರ್ಖಂಡ್’ನ ಧನಬಾದ್’ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ನರ್ಸಿಂಗ್ ಹೋಮ್ ಮಾಲೀಕ ಡಾ. ವಿಕಾಸ್ ಹಜಾರ ಮತ್ತು ಅವರ ಪತ್ನಿ ಡಾ. ಪ್ರೇಮಾ ಹಜಾರ, ಮಾಲೀಕರ ಸೋದರ ಸೊಸೆ ಸೋಹನ್ ಕುಮಾರಿ, ಮನೆ ಸಹಾಯಕಿ ತಾರಾ ದೇವಿ ಮೃತಪಟ್ಟವರು.

ರಾಜಧಾನಿ ರಾಂಚಿಯಿಂದ 170 ಕಿಲೋಮೀಟರ್ ದೂರದ ಧನಬಾದಿನ ಬ್ಯಾಂಕ್ಮೋರ್ ಪ್ರದೇಶದ ನರ್ಸಿಂಗ್ ಹೋಂ ಮತ್ತು ಮಾಲಿಕರ ಮನೆಗೆ ಸೇರಿದ ಸ್ಟೋರ್ ರೂಂನಲ್ಲಿ ಮುಂಜಾನೆ ಎರಡು ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ.

“ಸ್ಟೋರ್ ರೂಮಿನಲ್ಲಿ ಕಾಣಿಸಿಕೊಂಡ ಬೆಂಕಿಯ ಕಾರಣಕ್ಕೆ ಉಸಿರುಗಟ್ಟಿ ಐವರು ಸಹಿತ ಸಾವಿಗೀಡಾಗಿದ್ದಾರೆ. ಒಬ್ಬರು ಸುಟ್ಟ ಗಾಯಕ್ಕೀಡಾಗಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ತಿಳಿದು ಬಂದಿಲ್ಲ, ತನಿಖೆ ನಡೆದಿದೆ. ಸತ್ತ ಐವರಲ್ಲಿ ಐದನೆಯವರ ಗುರುತು ಇನ್ನೂ ಪತ್ತೆಯಾಗಿಲ್ಲ” ಎಂದು ಧನಬಾದ್ ಸಹ ವಿಭಾಗೀಯ ಮ್ಯಾಜಿಸ್ಟ್ರೇಟ್ ಪ್ರೇಮ್ ಕುಮಾರ್ ತಿವಾರಿ ಹೇಳಿದ್ದಾರೆ.