ಡೈಲಿ ವಾರ್ತೆ:01 ಏಪ್ರಿಲ್ 2023

8 ವರ್ಷದ ಬಾಲಕನನ್ನು ಕಲ್ಲಿನಿಂದ ಜಜ್ಜಿ ಹತ್ಯೆಗೈದ ದುಷ್ಕರ್ಮಿಗಳು

ಹುಬ್ಬಳ್ಳಿ: ಶಾಲೆಗೆ ರಜೆ ಘೋಷಿಸಿದ್ದ ಹಿನ್ನೆಲೆಯಲ್ಲಿ ಅಜ್ಜಿಯ ಮನೆಗೆ ಬಂದಿದ್ದ ಬಾಲಕನ ಮೇಲೆ ದುಷ್ಕರ್ಮಿಗಳು ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಮೃತಪಟ್ಟ ಬಾಲಕನನ್ನು ನದೀಂ ಹಸನಸಾಬ್ ಎಂದು
ಗುರುತಿಸಲಾಗಿದೆ.

ನದೀಂ ಬೆಂಡಿಗೇರಿ ಪೊಲೀಸ್ ಠಾಣೆ ಸಮೀಪದ ದೊಡ್ಡನೆ ಚಾಳದಲ್ಲಿರುವ ಅಜ್ಜಿಯ ಮನೆಗೆ ಬಂದಿದ್ದ ಬಾಲಕನನ್ನು ದುಡ್ಡು ಕೊಡುತ್ತೇವೆ ಎಂದು ಹೇಳಿ ಕರೆದುಕೊಂಡು ಹೋದ ದುಷ್ಕರ್ಮಿಗಳು ಹತ್ಯೆ ನಡಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಬಾಲಕ ನದೀಂ ಗುರುವಾರದಿಂದ ನಾಪತ್ತೆಯಾಗಿದ್ದರು. ಈ ಕುರಿತು ಪೋಷಕರು ಬೆಂಡಿಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ ಮಧ್ಯಾಹ್ನ ಮುಳ್ಳಿನ ಕಂಟಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಬೆಂಡಿಗೇರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಡಿಸಿಪಿ ರಾಜೀವ್ ಎಂ ಭೇಟಿ ನೀಡಿ ಹತ್ಯೆ ನಡೆಸಿದ ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.