ಡೈಲಿ ವಾರ್ತೆ:01 ಏಪ್ರಿಲ್ 2023

ವಾಟ್ಸಪ್‌ ಅಡ್ಮಿನ್‌ಗಳೇ ಎಚ್ಚರ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದರೆ ನೋಟಿಸ್‌.!

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ನೀತಿ ಸಂಹಿತೆಯೂ ಜಾರಿಯಾಗಿದೆ. ಇದರ ಬಿಸಿ ಸಾಮಾಜಿಕ ಜಾಲತಾಣಗಳಿಗೂ ತಟ್ಟಿದೆ. ಮತದಾನದ ದಿನಾಂಕ ಘೋಷಣೆಯಾದ ಬೆನ್ನಲ್ಲೇ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಚುನಾವಣಾ ಆಯೋಗ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳ ಮೇಲೆ ಚುನಾವಣೆ ಆಯೋಗ ಹದ್ದಿನ ಕಣ್ಣಿಟ್ಟಿದೆ.



ಹೀಗಾಗಿ ನಿರ್ಧಿಷ್ಟ ಪಕ್ಷ ವ್ಯಕ್ತಿಯ ಪರ ಮತಯಾಚನೆಯ ಮತ್ತು ಒಲುವು ತೋರುವ ಸಂದೇಶಗಳು ಬಂದರೆ ,ಕಳಿಸಿದರೆ ಸಂಬಂಧಪಟ್ಟ ಅಡ್ಮಿನ್‌ಗಳ ಮೇಲೇ ಚುನಾವಣೆ ಆಯೋಗ ಕ್ರಮ ಜರುಗಿಸುವ ಸಾಧ್ಯತೆ ಇರುವುದರಿಂದ ಎಚ್ಚರವಾಗಿರುವುದು ಒಳಿತು. ಏಕೆಂದರೆ ನೀತಿ ಸಂಹಿತೆ ಉಲ್ಲಂಘನೆಯಡಿ ಕೊಡಗು ಜಿಲ್ಲೆ ವಾಟ್ಸಾಪ್‌ ಗ್ರೂಪ್‌ ಅಡ್ಮಿನ್‌ಗೆ ಚುನಾವಣಾ ಆಯೋಗ ನೋಟಿಸ್‌ ಕೊಟ್ಟಿದೆ. ಇಲ್ಲಿನ ನಿವಾಸಿ ವಿಪಿ ಶ್ರೀಧರ್‌ ಆಡ್ಮಿನ್‌ ಆಗಿರುವ ವಾಟ್ಸಾಪ್‌ ಗ್ರೂಪ್‌ನಲ್ಲಿ ರಾಜಕೀಯ ಹೇಳಿಕೆ ಬಗ್ಗೆ ವೀಡಿಯೊ ಶೇರ್‌ ಆಗಿತ್ತು. ಇದಕ್ಕೆ ಕಾರಣ ಕೇಳಿ 24 ಗಂಟೆಯೊಳಗೆ ಉತ್ತರ ನೀಡುವಂತೆ ಮಡಿಕೇರಿ ಚುನಾವಣಾಧಿಕಾರಿ ಸೂಚನೆ ನೀಡಿದ್ದಾರೆ.

ಈ ಬೆಳವಣಿಗೆ ಬೆನ್ನಲ್ಲಿ ಈಗ ಎಚ್ಚೆತ್ತುಕೊಂಡಿರುವ ವಾಟ್ಸ್‌ಆಪ್‌ ಅಡ್ಮಿನ್ ಗಳು ತಮ್ಮ ವ್ಯಾಪ್ತಿಯ ಗ್ರೂಪ್‌ಗೆ ಮನವಿ ಸಂದೇಶ ರವಾನಿಸಿ, ನಿಮ್ಮ ನಿಮ್ಮ ಪೋಸ್ಟಗಳಿಗೆ ನೀವೇ ಹೊಣೆ ಎಂದು ಎಚ್ಚರಿಕೆಯನ್ನೂ ನೀಡಿ, ಮೆಸೇಜ್‌ ಮತ್ತು ಪಕ್ಷ ದ ಪರವಾಗಿರುವ ಚಿತ್ರ ಚಿಹ್ನೆಗಳ ಬಗ್ಗೆ ಕಡಿವಾಣ ಹಾಕಿ, ಆಯೋಗದ ಕೆಂಗಣ್ಣಿಗೆ ಗುರಿಯಾಗದಂತೆ ಮಾಹಿತಿ ಹಂಚಿಕೊಳ್ಳಿ ಎಂದು ವಿನಂತಿಸುವುದು ಸಾಮಾನ್ಯವಾಗಿದೆ.