ಡೈಲಿ ವಾರ್ತೆ:02 ಏಪ್ರಿಲ್ 2023

ಏಪ್ರಿಲ್ 15ರ ವರೆಗೆ ಬಾಳೆಬರೆ ಘಾಟಿ ತೀರ್ಥಹಳ್ಳಿ- ಕುಂದಾಪುರ ಸಂಚಾರ ರದ್ದು

ಶಿವಮೊಗ್ಗ: ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟಿ ಎರಡು ಭಾಗಗಳಲ್ಲಿ ಕಾಂಕ್ರೀಟ್‌ ಪೇವ್‌ಮೆಂಟ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಈ ಮಾರ್ಗದಲ್ಲಿ ಎ. 15ರ ವರೆಗೆ ವಾಹನ ಸಂಚಾರ ನಿಷೇಧಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ತಾತ್ಕಾಲಿಕ ಅಧಿಸೂಚನೆ ಹೊರಡಿಸಿದ್ದಾರೆ.

ಈ ಹಿಂದೆ ಎ. 5ರ ವರೆಗೆ ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಕಾಮಗಾರಿ ವೇಳೆ ಹಲವು ಬಾರಿ ಯಂತ್ರೋಪಕರಣಗಳು ದುರಸ್ತಿಗೆ ಒಳಪಟ್ಟ ಕಾರಣ ಹೆಚ್ಚುವರಿ ಹತ್ತು ದಿನಗಳ ಕಾಲ ಸಂಚಾರ ನಿಷೇಧ ವಿಸ್ತರಿಸಲಾಗಿದೆ.

ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆ ಹೋಗುವ ಲಘು ವಾಹನಗಳು ಪರ್ಯಾಯ ಮಾರ್ಗವಾಗಿ ತೀರ್ಥಹಳ್ಳಿ-ಹಾಲಾಡಿ-ಬಸ್ರೂರು ಅಥವಾ ತೀರ್ಥಹಳ್ಳಿ – ಹೆಬ್ರಿ- ಉಡುಪಿ- ಕುಂದಾಪುರ ಈ ರಸ್ತೆ ಮೂಲಕ ಸಂಚರಿಸಬೇಕು. ಘನ ವಾಹನಗಳು ಪರ್ಯಾಯ ಮಾರ್ಗವಾಗಿ ತೀರ್ಥಹಳ್ಳಿ- ಕಾನಗೋಡು- ನಗರ-ಕೊಲ್ಲೂರು ಕುಂದಾಪುರ ಈ ರಸ್ತೆ ಮೂಲಕ ಸಂಚರಿಸಬೇಕು.