ಡೈಲಿ ವಾರ್ತೆ:27 ಏಪ್ರಿಲ್ 2023

ಪತ್ನಿಯನ್ನು ಬಸ್ ಹತ್ತಿಸಲು ಹೋಗಿದ್ದ ಪತಿ ಅನುಮಾನಾಸ್ಪದ ಶವವಾಗಿ ಪತ್ತೆ.!

ಕೊಟ್ಟಿಗೆಹಾರ: ಪತ್ನಿಯನ್ನು ಬಸ್ ಹತ್ತಿಸಿ ಬೈಕಿನಲ್ಲಿ ಬರುತ್ತೇನೆಂದು ಹೇಳಿದ ಪತಿ ಹೆಬ್ಬರಿಗೆ ಸಮೀಪ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾದ ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬರಿಗೆಯಲ್ಲಿ ಬುಧವಾರ ನಡೆದಿದೆ.

ಚಿಕ್ಕಮಗಳೂರು ತಾಲ್ಲೂಕಿನ ತೇಗೂರಿನ ದಿಲೀಪ್ (40) ಮೃತ ಪಟ್ಟ ವ್ಯಕ್ತಿ. ಧರ್ಮಸ್ಥಳದಲ್ಲಿ ಮುಡಿ ತೆಗೆಯುವ ಕಾರ್ಯ ಮಾಡುತ್ತಿದ್ದ ದಿಲೀಪ್ ಉಜಿರೆಯಲ್ಲಿ ವಾಸವಿದ್ದರು. ಪತ್ನಿಯೊಂದಿಗೆ ತೇಗೂರಿಗೆ ಬಂದಿದ್ದ ದಿಲೀಪ್ ಬುಧವಾರ ಬೈಕ್‌ ನಲ್ಲಿ ಉಜಿರೆಗೆ ಹೊರಟಿದ್ದು ಕೊಟ್ಟಿಗೆಹಾರ ಸಮೀಪ ಬರುತ್ತಿದ್ದಂತೆ ಮಳೆ ಪ್ರಾರಂಭವಾಗಿದ್ದರಿಂದ ಪತ್ನಿಯನ್ನು ಬಸ್ಸಿಗೆ ಹತ್ತಿಸಿ ಉಜಿರೆಗೆ ಹೋಗಿರಲು ಹೇಳಿ ತಾನು ಮಳೆ ನಿಂತ ಮೇಲೆ ಬೈಕ್‌ ನಲ್ಲಿ ಬರುವುದಾಗಿ ತಿಳಿಸಿದ್ದಾರೆ.

ಬುಧವಾರ ಸಂಜೆ ಹೆಬ್ಬರಿಗೆ ಸಮೀಪ ರಸ್ತೆ ಬದಿಯಲ್ಲಿ ದಿಲೀಪ್ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹದ ಜೊತೆಗಿದ್ದ ಮೊಬೈಲ್‌ನಿಂದಾಗಿ ಮೃತದೇಹದ ಗುರುತು ಪತ್ತೆಯಾಗಿದ್ದು ಈ ಬಗ್ಗೆ ಸ್ಥಳಕ್ಕೆ ಬಣಕಲ್ ಪೊಲೀಸ್ ಠಾಣಾ ಪಿಎಸ್‌ ಐ ಜಂಬೂರಾಜ್ ಮಹಾಜನ್, ಎಎಸ್‌ ಐ ಶಶಿ, ಸಿಬ್ಬಂದಿಗಳಾದ ಜಗದೀಶ್ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.

.